ಮಂಗಳೂರು: ಇಲ್ಲಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆ ಆಧಾರದಲ್ಲಿ ಹೈಡ್ರೋಜನ್ ತಂತ್ರಜ್ಞಾನವನ್ನು ಬಳಿಸಿಕೊಂಡು ಹೈಡ್ಜೆನ್ ಉತ್ಪಾದನೆ ಮಾಡಿರುವುದು ಶ್ಲಾಘನೀಯ. ಇದೊಂದು ವಿನೂತನ ಪ್ರಯತ್ನದ ಭಾಗವಾಗಿದೆ. ಕರಾವಳಿಯ ಮಣ್ಣು, ನೀರು, ಊರ್ ಬಳಸಿಕೊಂಡು ಉತ್ಪಾದನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದರು.
ಇಲ್ಲಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೈಡ್ಜೆನ್ ಎಂಟು ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ಯಾಕ್ ಟು ಊರ್ ಕಲ್ಪನೆಯ ಸಾಕಾರಕ್ಕೆ ಜಿಲ್ಲೆಯಲ್ಲಿ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಹೈಡ್ರೋಜನ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಹೊಸ ಹೊಸ ಕಲ್ಪನೆಗಳು ವಿಕಾಸ ಆಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಸಾಕಾರ ಆಗಬೇಕು. ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಆಗಬೇಕು. ಇಂತಹ ತಂತ್ರಜ್ಞಾನಗಳ ಅವಿಷ್ಕಾರಕ್ಕೆ ಇಂತಹ ವೇದಿಕೆ ಸಾಕಾರ ಆಗಲಿದೆ ಎಂದರು.

ಮಂಗಳೂರಿನಲ್ಲಿ ವಿಶ್ವ ದರ್ಜೆಯ ಹೈಡ್ರೋಜನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಸ್ಥಳೀಯ ಮಟ್ಟದಲ್ಲಿ ಮತ್ತು ಭಾರತ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡುವೆ. ಕೈಗಾರಿಕಾ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರೋಲೈಜರ್ ವ್ಯವಸ್ಥೆಗಳನ್ನು ಉತ್ಪಾದಿಸಲು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ತಿತ್ವ ವಿಸ್ತರಿಸುವಂತೆ ಆಗಲಿ ಎಂದರು.
ತಂತ್ರಜ್ಞಾನ ಅಭಿವೃದ್ಧಿಯಿಂದ ನೈಜ-ಪ್ರಪಂಚದ ಕೈಗಾರಿಕಾ ಅನ್ವಯಕ್ಕೆ ಹಾಗೂ ಪ್ರತಿಯೊಂದು ಸ್ಕಿಡ್ ಸಂಪೂರ್ಣವಾಗಿ ಸಂಯೋಜಿತ, ಆನ್-ಸೈಟ್ ಹೈಡ್ರೋಜನ್ ಉತ್ಪಾದನಾ ವ್ಯವಸ್ಥೆಯಾಗಿದ್ದು, ಇದನ್ನು ಹೈಡ್ಜೆನ್ ಸ್ವಾಮ್ಯದ ಪೇಮ್ ಎಲೆಕ್ಟ್ರೋಲೈಜರ್ ತಂತ್ರಜ್ಞಾನವನ್ನು ಬಳಸಿಕೊಂಡು ಮಂಗಳೂರಿನಲ್ಲಿ ಎಂಜಿನಿಯರಿಂಗ್ ಮತ್ತು ಜೋಡಣೆ ಮಾಡಲಾಗಿದೆ. ಇದು ಹೈಡ್ರೋಜನ್ ಜಾಗದಲ್ಲಿ ಭಾರತೀಯ ಡೀಪ್ ಟೆಕ್ ಕಂಪನಿಗಳಲ್ಲಿ ಅಪರೂಪದ ಪ್ರಯತ್ನ ಎಂದರು.
ಕಂಪನಿಯ ಸಿಒಒ ಡಾ. ಮಾಣಿಪ್ಪಡ್ಡಿ ಕೃಷ್ಣ ಕುಮಾರ್ ಅವರು ಮಾತನಾಡಿ, ಮಂಗಳೂರಿನಲ್ಲಿ ಸ್ಥಳೀಯವಾಗಿ ತಯಾರಿಸಲಾದ ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ಗಳು ಭಾರತದಲ್ಲಿ ಮೊದಲ ರೀತಿಯ ತಂತ್ರಜ್ಞಾನ ವೇದಿಕೆ ಪ್ರತಿನಿಧಿಸುತ್ತವೆ. ಈ ಸಾಧನೆ ಪ್ರಧಾನಿ ಮೋದಿ ಅವರ ದೃಷ್ಟಿಕೋನಕ್ಕೆ ಹೊಂದಿಕೆ ಆಗುತ್ತದೆ. ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಬೆಂಬಲಿಸುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಲೋಕಲ್ ಫಾರ್ ಗ್ಲೋಬಲ್ ಉಪಕ್ರಮಗಳನ್ನು ಸಹ ಸಾಕಾರಗೊಳಿಸುತ್ತದೆ ಎಂದರು.
ಡಾ. ಗೌತಮ್ ದಳಪತಿ, ರಮ್ಯಶ್ರೀ ದೊಡ್ಡಮಣಿ ಶ್ರೀವಾಸ್ತವ ಹಾಗೂ ವಸಂತ ಖೇದಿಗೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.





