ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ 22 ನೇ ಪದವಿ ಪ್ರದಾನ, ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ ಕಾಲೇಜಿನ 29 ನೇ ಪದವಿ ಪ್ರದಾನ, ಫಾದರ್ ಮುಲ್ಲರ್ ಫಿಸಿಯೋಥೆರಪಿ ಕಾಲೇಜಿನ 28 ನೇ ಪದವಿ ಪ್ರದಾನ ಕಾರ್ಯಕ್ರಮವು ಶುಕ್ರವಾರ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ಅದ್ದೂರಿಯಾಗಿ ನಡೆಯಿತು. 518 ಪದವೀಧರರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಆರೋಗ್ಯ ಸೇವಾ ಪ್ರಮಾಣ ವಚನ ಸ್ವೀಕರಿಸಿದರು.
ಪದವೀಧರರ ಮೆರವಣಿಗೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಬ್ಯಾಂಡ್ ಗೌರವಪೂರ್ವಕವಾಗಿ ಮುನ್ನಡೆಸಿತು. ಪ್ರಾಧ್ಯಾಪಕರು ಮತ್ತು ಗಣ್ಯರ ಅನ್ನು ಕನ್ವೆನ್ಷನ್ ಸೆಂಟರ್ಗೆ ಕರೆತರಲಾಯಿತು. ಸಂಸ್ಥಾಪಕ ರೆವ. ಫಾ. ಆಗಸ್ಟಸ್ ಮುಲ್ಲರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಅಧ್ಯಕ್ಷ ಡಾ. ಪೀಟರ್ ಪಾಲ್ ಸಾಲ್ಡಾನಾ, ನಿರ್ದೇಶಕ ಫಾ. ಫಾಸ್ಟಿನ್ ಲೂಕಾಸ್ ಲೋಬೊ, ಕವಿವಿ ಕುಲಪತಿ ಪ್ರೊ. ಎ. ಎಂ ಖಾನ್ , ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸಂಯುಕ್ತ ನಿರ್ದೇಶಕ ಡಾ. ಎಸ್. ವೆಂಕಟ ರಾಘವ ಇದ್ದರು.
ಡಾ. ಎಸ್. ವೆಂಕಟ ರಾಘವ ಅವರು ಮಾತನಾಡಿ, ರೋಗಿ ಕೇಂದ್ರಿತ ಸೇವೆ, ಪರಿಶ್ರಮ ಮತ್ತು ನಿರಂತರ ಅಧ್ಯಯನದ ಮಹತ್ವವನ್ನು ವಿವರಿಸಿದರು. ತಂತ್ರಜ್ಞಾನ ಯುಗದಲ್ಲಿ ಮಾನವೀಯ ಗುಣಗಳನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಎಂ. ಖಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವ ಜತೆಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಸವಾಲುಗಳನ್ನು ಎದುರಿಸಿ ಸಮಾಜದ ವಿಶ್ವಾಸ ಕಾಪಾಡುವುದು ಅತೀ ಮುಖ್ಯ. ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸ ಹೊಸ ಬದಲಾವಣೆ ಆಗುತ್ತಿವೆ. ಟೆಲಿಮೆಡಿಸಿನ್, ರೋಬೋಟಿಕ್ಸ್ ಮತ್ತು 3ಡಿ ಮುದ್ರಣದಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದರು.
ಡಾ. ಪೀಟರ್ ಪಾಲ್ ಸಾಲ್ಡಾನಾ ಅವರು ಅಧ್ಯಕ್ಷೀಯ ಭಾಷಣ ಮಾಡಿ ಮಾತನಾಡಿ, ವಿದ್ಯೆಯ ಜತೆಗೆ ಮಾನವೀಯ ಸ್ಪರ್ಶದ ಮಹತ್ವ ಒತ್ತಿ ಹೇಳಿದರು.
ಪದವೀಧರರು ತಮ್ಮ ಪ್ರಮಾಣ ಪತ್ರಗಳನ್ನು ಗಣ್ಯರಿಂದ ಸ್ವೀಕರಿಸಿದರು.
2025ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು ಪ್ರದಾನ ಮಾಡಲಾಯಿತು.ಇಶ್ರತ್ ಫಾತಿಮಾ ಅಬ್ಬಾಸಿ, ಮರಿಯಂ ಜುಹಮ್ ಪಿ. ಎಸ್ ಹಾಗೂ ಡಾ. ಕೃತಿಕಾ ಸಾಗ್ರಿ ನಾಯಕ್ ಅವರಿಗೆ ಪದಕ ಪ್ರದಾನ ಮಾಡಲಾಯಿತು.
ಪದವೀಧರರ ಪರವಾಗಿ ಡಾ. ಕೀರ್ತಿ ಭಟ್ ಅವರು ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಡಾ. ಬರ್ಟನ್ ಮೊಂಟೇರೋ ಮತ್ತು ಡಾ. ಡಿಲನ್ ಡೆನಿಸ್ ನೊರೊನ್ಹಾ ನಿರೂಪಿಸಿದರು.





