ವಾಣಿಜ್ಯ ವಿಭಾಗದ ಟಾಪರ್ ದಿಶಾ ಪೂಜಾರಿಗೆ ವಿಶ್ವ ಬಂಟರ ಪ್ರತಿಷ್ಠಾನದ ಬೆಂಬಲ: ಶಿಕ್ಷಣದ ಖರ್ಚು ಸಂಪೂರ್ಣ ಭರಿಸುವುದಾಗಿ ಡಾ. ಬಿ ಆರ್ ಶೆಟ್ಟಿ ಘೋಷಣೆ

Spread the love

ಮೂಡುಬಿದಿರೆ: 2026 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿ ಮುಂದಿನ ವಿದ್ಯಾಭ್ಯಾಸಕ್ಕೆ ಮಹತ್ವದ ಬೆಂಬಲ ಲಭಿಸಿದೆ.

ವಿಶ್ವ ಬಂಟರ ಪ್ರತಿಷ್ಠಾನದ ಮಹಾಪೋಷಕ ಡಾ. ಬಿ. ಆರ್. ಶೆಟ್ಟಿ ಅವರು ದಿಶಾ ಪೂಜಾರಿ ಸಂಪೂರ್ಣ ವಿದ್ಯಾಭ್ಯಾಸದ ಖರ್ಚ ಅನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಕಚೇರಿಯಲ್ಲಿ ವಿಶ್ವ ಬಂಟರ ಪ್ರತಿಷ್ಠಾನದ ವತಿಯಿಂದ ದಿಶಾ ಅವರನ್ನು ಗೌರವಿಸಲಾಯಿತು.

ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಬಿ. ಆರ್. ಶೆಟ್ಟಿ, ಅವರು ದಿಶಾ ಜತೆಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಜತೆಗೆ, ದಿಶಾಳ ಆಯ್ಕೆಯಂತೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣ ಹಾಗೂ ನಂತರದ ಕನಸು ಚಾರ್ಟರ್ಡ್ ಅಕೌಂಟೆಂಟ್ ಆಗುವವರೆಗಿನ ಶಿಕ್ಷಣ, ಊಟ ಮತ್ತು ವಸತಿ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು.

ಇದೇ ವೇಳೆ, ದಿಶಾ ಪೂಜಾರಿ ಪಿಯು ಶಿಕ್ಷಣ ಪಡೆದ ಆಳ್ವಾಸ್ ಆವರಣದಲ್ಲಿರುವ ಡಾ. ಬಿ. ಆರ್. ಶೆಟ್ಟಿ ಅವರ ಹೆಸರಿನ ಬ್ಲಾಕ್‌ನಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿಶ್ವ ಬಂಟರ ಪ್ರತಿಷ್ಠಾನದ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಸಂಜೀವ್ ರೈ, ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ, ಉಪಾಧ್ಯಕ್ಷ ಸಿಎ ಸುದೀರ್ ಕುಮಾರ್ ಶೆಟ್ಟಿ, ಖಜಾಂಚಿ ಸಿಎ ಪ್ರವೀಣ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಡಾ. ಶಿಶಿರ್ ಶೆಟ್ಟಿ, ಪ್ರಕಾಶ್ ಮಾಣೈ ಹಾಗೂ ಸದಸ್ಯರಾದ ದೀಪಕ್ ಪ್ರಸಾದ್ ಮತ್ತು ಜೀವರಾಜ್ ಶೆಟ್ಟಿ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *