ಮಂಗಳೂರು: ಆಳ್ವಾಸ್ ನುಡಿಸಿರಿ ವಿರಾಸತ್ ಮಂಗಳೂರು ಘಟಕ ವತಿಯಿಂದ ನಗರದ ಲಾಲ್ಭಾಗ್ ಕರಾವಳಿ ಉತ್ಸವ ಮೈದಾನದಲ್ಲಿ, ಕೀರ್ತಿಶೇಷ ಡಾ. ಎನ್. ವಿನಯ್ ಹೆಗ್ಡೆ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧುನಿಕ ಶಿಕ್ಷಣ, ಕಲೆ, ಸಾಹಿತ್ಯ,ಕ್ರೀಡೆಯನ್ನು ಒಳಗೊಂಡಂತೆ ವಿದ್ಯಾರ್ಥಿಯಲ್ಲಿ ಸಮಗ್ರವಾದ ಪ್ರತಿಭೆಯನ್ನು ಹೊರಗಿಡುವಂತೆ ಮಾಡುವ ಜತೆಗೆ ನೆಲದ ಸಂಸ್ಕೃತಿ, ಶಕ್ತಿಯನ್ನು ಆಳ್ವಾಸ್ ಸಾಂಸ್ಕೃತಿಕ ವೈಭವದ ಮೂಲಕ ಹೊರಗಿಡುವ ಪ್ರಯತ್ನ ಶ್ಲಾಘನೀಯವಾದದ್ದು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ಭಾಗದಲ್ಲಿ ಇದೊಂದು ಬಹಳ ಒಳ್ಳೆಯ ಕಾರ್ಯಕ್ರಮವಾಗಿದ್ದು, ಯಾವುದೇ ಸರಕಾರಗಳೇ ನಾಚಿಕೊಳ್ಳುವಂತಹ ರೀತಿಯಲ್ಲಿ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಶಿಕ್ಷಣ ನೀಡುವ ಕರ್ಯ ಮೆಚ್ಚುಗೆಗೆ ಅರ್ಹವಾಗಿದೆ. ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವ ವಿಚಾರದಲ್ಲಿ ಡಾ.ಆಳ್ವರನ್ನು ತುಳುನಾಡಿನ ವ್ಯಕ್ತಿಯನ್ನಾಗಿ ಸರಕಾರ ಆಯ್ಕೆ ಮಾಡಿದ್ದು ಕೂಡ ಘನತೆಯನ್ನು ಹೆಚ್ಚಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಮಾತನಾಡಿ, ಸೌಂದರ್ಯ ಪ್ರಜ್ಞೆ ಉಳ್ಳವರಿಂದ ದೇಶ, ಸಮಾಜ, ಪರಿಸರ ಎಲ್ಲ ವಿಚಾರದಲ್ಲಿಯೂ ಸಾಮರಸ್ಯವಾದ ಬದುಕನ್ನು ಕಾಣಲು ಬಯಸುತ್ತಾರೆ. ಆದರೆ ಸೌಂದರ್ಯ ಪ್ರಜ್ಞೆ ಇಲ್ಲದವರು ಸಮಾಜಕ್ಕೆ ಬಹಳಷ್ಟು ಅಪಾಯಕಾರಿಯಾಗುತ್ತಾರೆ. ಪ್ರತಿಯೊಬ್ಬರು ದೇಶದ ಸಂಪತ್ತು ಆಗುವ ಮೂಲಕ ಸೌಂದರ್ಯಪ್ರಜ್ಞೆಯನ್ನು ತಮ್ಮಲ್ಲಿ ಜಾಗೃತ ಮಾಡಬೇಕು ಎಂದರು.
ಈ ಸಂದರ್ಭ ಸಮಾಜದ ನಾನಾ ಸ್ತರಗಳ ಪ್ರಮುಖರು ಭಾಗವಹಿಸಿದ್ದರು. ಈ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೀರ್ತಿಶೇಷ ಡಾ. ಎನ್. ವಿನಯ್ ಹೆಗ್ಡೆಯವರಿಗೆ ಅರ್ಪಿಸಲಾಗಿತ್ತು. ಇದೇ ಸಂದರ್ಭ ಮಂಗಳೂರು ಘಟಕದ ವತಿಯಿಂದ ಡಾ.ಮೋಹನ್ ಆಳ್ವ ಅವರನ್ನು ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ-ಅಷ್ಟಲಕ್ಷ್ಮಿ ಬಡಗುತಿಟ್ಟು ಯಕ್ಷಗಾನ-ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ ಹಾಗೂ ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಾವಿರಾರು ಮಂದಿ ಪ್ರೇಕ್ಷಕರಾಗಿ ಕಾಣಿಸಿಕೊಂಡಿದ್ದರು.





