ಮಂಗಳೂರು: ಸ್ಥಳೀಯ ಖಾಸಗಿ ವಾಹಿನಿಯಲ್ಲಿ 6 ತಿಂಗಳ ಹಿಂದೆ ಪ್ರಸಾರಗೊಂಡಿದ್ದ ಯಕ್ಷ ತೆಲಿಕೆ ಕಾರ್ಯಕ್ರಮ ಸರಣಿಯಲ್ಲಿ ಬುರುಡೆ ಗ್ಯಾಂಗ್ ಎಂಬ ಯಕ್ಷ ಪ್ರಹಸನಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಎಂಬುವವರು ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದರೆ. ಅವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ಮತ್ತು ಮಹಿಳಾ ಠಾಣೆಗೆ ದೂರು ನೀಡಲಾಗಿದೆ ಎಂದು ಯಕ್ಷಗಾನ ಕಲಾವಿದರಾದ ಸುಂದರ ರೈ ಮಂದಾರ, ಪ್ರಜ್ವಲ್ ಕುಮಾರ್ ಮತ್ತು ದಿನೇಶ್ ಕೊಡಪದವು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಂದರ ರೈ ಮಂದಾರ ಅವರು ಮಾತನಾಡಿ, ಈ ಕಾರ್ಯಕ್ರಮ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ರಸಾರ ಆಗಿತ್ತು. ಏ.12 ರಂದು ಮಹೇಶ್ ಶೆಟ್ಟಿ ತಿಮರೋಡಿ ಎಂಬುವವರು ಪ್ರಜ್ವಲ್ ಕುಮಾರ್ ಅವರಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ತಾಯಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ಅವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ನನ್ನ ಬಗ್ಗೆಯೂ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದು ಇದರ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಬುರಡೆ ಗ್ಯಾಂಗ್ ಎಂದರೆ ಯಾಕಿಷ್ಟು ಇವರಿಗೆ ಕೋಪ, ಅವರಿಗೂ ಇದಕ್ಕೂ ಯಾವುದೇ ಹೊಲಿಕೆಯೇ ಇಲ್ಲ, ಅಷ್ಟು ಈ ಶೀರ್ಷಿಕೆಯನ್ನು ನಾವು ಕೊಟ್ಟಿರಲಿಲ್ಲ, ಅಷ್ಟಾಗಿ ಅವರು ಏನಾದರೂ ನಮ್ಮನ್ನು ಕೇಳಿದ್ದರೆ ನಾವು ಸಮಜಾಯಿಸಿ ಕೊಡುತ್ತಿದ್ದೇವು, ಆದರೆ ಈಗ ಆ ಅವಕಾಶವೇ ಇಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಇವರು ಬೇರೆಯವರಿಗೆ ಹೇಗೆ ನ್ಯಾಯ ಕೊಡಿಸಬಲ್ಲರು ಎಂದರು.
ಪ್ರಜ್ವಲ್ ಕುಮಾರ್ ಅವರು ಮಾತನಾಡಿ, ಒಂದು ಹೆಣ್ಣಿಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ, ಅದೇ ನೆಪದಲ್ಲಿ ಬೇರೆಯ ಮನೆಯ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದಿಸುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದರು.
ನಾವು ಮಾಡಿರುವ ಪ್ರಸಹನಕ್ಕೂ ಇಲ್ಲಿನ ಹೋರಾಟಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಅವರು ಇದನ್ನು ತಮಗೆ ತಾವೇ ಜೋಡಿಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮಗೆ ಕಾನೂನಿನ ಮೇಲೆ ಗೌರವವಿದ್ದು, ನ್ಯಾಯ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ದಿನೇಶ್ ಕೊಡಪದವು ಅವರು ಮಾತನಾಡಿ, ಯಕ್ಷ ಪ್ರಹಸನ ಪ್ರಸಾರವಾಗಿ ಆರು ತಿಂಗಳು ಕಳೆದಿದೆ. ಜಾಲತಾಣದ ಮೂಲಕ ಸಾಕಷ್ಟು ಬೆದರಿಕೆಗಳು ಬಂದಿವೆ. ಆದರೆ, ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬುರುಡೆ ಗ್ಯಾಂಗ್ ಎಂದರೆ ಅವರಿಗೆ ಕೋಪ ಬರುತ್ತದೆ ಎಂದಾದರೆ ಅವರು ಗ್ಯಾಂಗ್ ಸದಸ್ಯರೆಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದರು.
ಭಾಗವತರಾದ ಧೀರಜ್ ರೈ ಸಂಪಾಜೆ ಇದ್ದರು.





