ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ಅಪರಿಚಿತರ ಗುಂಪುವೊಂದು ಏಕಾಏಕಿ ಕೊಲೆಗೆ ಯತ್ನಿಸಿದ ಘಟನೆ ಕಣಕಣೇಶ್ವರ ದೇವಸ್ಥಾನದ ಬಳಿ ಬುಧವಾರ ಬೆಳಿಗ್ಗೆ ನಡೆದಿರುವುದು ಜನರಲ್ಲಿ ಆತಂಕದ ವಾತಾವರಣ ಮೂಡಿಸಿದೆ.
ಗೋಪಾಲಕೃಷ್ಣ ಅವರು ತಮ್ಮ ಕಾರಿನಿಂದ ಇಳಿದು ಹೇರ್ ಕಟಿಂಗ್ ಸೆಲೂನ್ ಗೆ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಗುಂಪು ದಾಳಿ ನಡೆಸಿದೆ, ದಾಳಿ ವೇಳೆ ಅವರಿಗೆ ಚಾಕುವಿನಿಂದ ತಲೆ ಹಾಗೂ ಕೈ ಭುಜಕ್ಕೆ ಹಲ್ಲೆ ಮಾಡಲಾಗಿದೆ. ತಕ್ಷಣವೇ ಅವರು ಅಲ್ಲಿಯೇ ಸಮೀಪದಲ್ಲಿದ್ದ ಬ್ಯಾಂಕ್ ವೊಂದರ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಗೋವಾ ನೋಂದಣಿ ಕಾರಿನಲ್ಲಿ ಬಂದಿದ್ದು, ಈ ತಂಡದ 6 ಮಂದಿ ಮೂರು ದಿನಗಳಿಂದ ಅಂಕೋಲಾದ ಹೊಟೇಲ್ ವೊಂದರಲ್ಲಿ ವಾಸ್ತವ್ಯ ಇತ್ತು ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗಾಯಗೊಂಡಿರುವ ಗೋಪಾಲಕೃಷ್ಣ ನಾಯಕ ಅವರನ್ನ ಅಂಕೋಲಾ ಅವಿನಾಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡದ ಪತ್ತೆಗಾಗಿ ಅಂಕೋಲಾ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಭೇಟಿ ನೀಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





