ಮಂಗಳೂರು: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2 ನೇ ಹಂತದ ಯೋಜನೆ ಅಡಿ ರಾಜ್ಯ ಸರಕಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ 165 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿದ್ದು, ಇದೇ 18 ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮರವೂರು ಸೇತುವೆ ಬಳಿ 3 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ, ವೆಲೆನ್ಸಿಯಾ ಚರ್ಚ್ ಬಳಿ 1.95 ಕೋಟಿ ರೂ. ವೆಚ್ಚದ ಕಾಮಗಾರಿ, ಚಿಲಿಂಬಿಗುಡ್ಡೆ ಬಳಿ 2 ಕೋಟಿ ರೂ. ವೆಚ್ಚ ಹಾಗೂ ಸುಂಕದಕಟ್ಟೆ ಉರ್ವಸ್ಟೋರ್ ಬಳಿ ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ 11 ಗಂಟೆಗೆ ನಡೆಯಲಿದೆ ಎಂದರು.
ರಾಜ್ಯ ಸರಕಾರವು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ವಿಜಯಪುರ ಮತ್ತು ತುಮಕೂರುಗಳಲ್ಲಿ 2,000 ಕೋಟಿ ರೂಪಾಯಿಗಳ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ 2 ಅನ್ನು 2024-25ನೇ ಸಾಲಿನಿಂದ 2026-27ನೆ ಸಾಲಿನವರೆಗೆ ಟೆಂಡರ್ ಕರೆದು ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಮಂಗಳೂರು ನಗರ ಪಾಲಿಕೆಯಲ್ಲೂ ಈಗಾಗಲೇ ಕೆಲವು ಕಾಮಗಾರಿಗಳು ಆರಂಭಗೊಂಡಿವೆ. ಅಧಿಕೃತ ಸಮಾರಂಭವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಶನಿವಾರ ನಡೆಯಲಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರಕಡದಿಂದ ಮರವೂರು ಸೇತುವೆವರೆಗೆ ಕಾಂಕ್ರಿಟ್ ರಸ್ತೆ, ಯೂಟಿಲಿಟಿ ಡಕ್ ನಿರ್ಮಾಣ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಕಾಮಗಾರಿ ಸ್ಲ್ಯಾಬ್ ಅಳವಡಿಸುವಿಕೆಯು 9 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ. ಬಿಜೈ ಆನೆಗುಂಡಿಯಿಂದ ಕಾಪಿಕಾಡು 4 ನೇ ಅಡ್ಡ ರಸ್ತೆ, ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಕೋಟಿ- ಚೆನ್ನಯ ಸರ್ಕಲ್, ವೆಲೆನ್ಸಿಯಾ ಸರ್ಕಲ್ ನಿಂದ ಗೋರಿಗುಡ್ಡೆ ನಾಗನಕಟ್ಟೆ, ಕೆ.ಎಸ್. ರಾವ್ ರಸ್ತೆಯಿಂದ ನ್ಯಾಯಾಲಯಗಳ ಸಂಕೀರ್ಣಕ್ಕೆ ಹೋಗುವ ಕೋರ್ಟ್ ಕಾಂಕ್ರಿಟ್ ರಸ್ತೆ ನಿರ್ಮಾಣ 9.50 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ ಎಂದರು.
ವಾಟರ್ ಫ್ರಂಟ್ ವಾಯು ವಿಹಾರ ಸಂಪರ್ಕ ಕಲ್ಪಿಸುವ ಬೋಳಾರ ಸೀ ಫೇಸ್ ಇನ್ ಫ್ರಂಟ್ ರಸ್ತೆ, ಕೆ. ಎನ್. ಬೋರ್ಡ್ ಯಾರ್ಡ್ ರಸ್ತೆ, ಲೋಬೊರಿವರ್ ರಸ್ತೆ, ಟಿವಿಎಸ್ ಫ್ಯಾಕಟಿ ರಸ್ತೆ, ಕೆನರಾ ಫ್ಲೈ ವುಡ್ ರಸ್ತೆ ಹಾಗೂ 60 ನೇ ಬೆಂಗ್ರೆ ವಾರ್ಡ್ ರಸ್ತೆಗಳಿಗೆ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟ್ ಅಳವಡಿಕೆ ಸೇರಿದಂತೆ ಒಟ್ಟು 25 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು.
ಸಾಮಾನ್ಯ ಘಟಕದ ಅನುದಾನದಡಿ 124.50 ಕೋಟಿ ರೂ., ಪರಿಶಿಷ್ಟ ಜಾತಿ ಅನುದಾನದಲ್ಲಿ 28.50 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅನುದಾನದಡಿ 12 ಕೋಟಿ ರೂ.ಗಳ ಕಾಮಗಾರಿಗಳು ಒಳಗೊಂಡಿವೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಭಾಸ್ಕರ್, ಡಿ.ಕೆ.ಅಶೋಕ್, ಪ್ರೇಮ್, ಕೇಶವ, ಚೇತನ್, ಇಮ್ರಾನ್, ಸೋನ್ಸ್, ಚಂದ್ರಹಾಸ ಪೂಜಾರಿ ಇದ್ದರು.





