ಮಂಗಳೂರು( ತಲಪಾಡಿ): ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಬೆಳೆದ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಶಾಲೆಯ ತರಕಾರಿ ತೋಟದಲ್ಲಿ ಬೆಳೆದ ಬೆಂಡೆ, ಬದನೆ, ಮೆಣಸು, ಸೌತೆಕಾಯಿ, ಬಸಳೆ, ತೊಂಡೆ, ಕುಂಬಳ, ಹಲಸಿನ ಗುಜ್ಜೆ, ಸೋರೆಕಾಯಿ ಮುಂತಾದ ತರಕಾರಿಗಳನ್ನು ವಿದ್ಯಾರ್ಥಿಗಳು ಕಟಾವು ಮಾಡಿ ಮಾರಾಟಕ್ಕೆ ಸಿದ್ಧಪಡಿಸಿದರು.

ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತರಕಾರಿಗಳನ್ನು ತೂಕ ಮಾಡಿ ಪ್ಯಾಕ್ ಮಾಡಿ, ಸೂಕ್ತ ಬೆಲೆ ನಿಗದಿ ಪಡಿಸಿದರು. ನಂತರ ಶಾಲಾ ಆವರಣದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿ, ಶಿಕ್ಷಕ ಶಿಕ್ಷಕೇತರರಿಗೆ ಮಾರಾಟ ಮಾಡಿದರು.
ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕೃಷಿಯ ಮಹತ್ವ, ಹಣದ ನಿರ್ವಹಣೆ ಮತ್ತು ವ್ಯಾಪಾರ ಕೌಶಲಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಲಭಿಸಿತು. ಶಿಕ್ಷಕ-ಶಿಕ್ಷಕೇತರರು ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿಗಳನ್ನು ಖರೀದಿಸಿದರು.
ಶಾಲಾ ಆಡಳಿತವು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತವೆ ಎಂದು ತಿಳಿಸಿದೆ.





