ಕಾರವಾರ: ಕಾರವಾರದಿಂದ ಕೈಗಾದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಯೋಜನೆ ಸಿದ್ದಪಡಿಸಿ, ಕಾರ್ಯಗತಗೊಳಿಸುವಂತೆ ಲೋಕೋಪಯೋಗಿ, ನಗರಸಭೆ, ಕೈಗಾದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಚ ಹಾಗೂ ಶಾಸಕ ಸತೀಶ್ ಸೈಲ್ ನಿರ್ದೇಶನ ನೀಡಿದರು.
ಗುರುವಾರ ಎನ್.ಪಿ.ಸಿ.ಐ.ಎಲ್ ಕೈಗಾದ ಸಿ.ಎಸ್.ಆರ್ ಪ್ರಾಯೋಜಕತ್ವದ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಧೀನ ಸಂಸ್ಥೆಗಳಿಗೆ ಅಂಬುಲೆನ್ಸ್ ಹಾಗೂ ಇತರೆ ವಾಹನಗಳ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರವಾರ ಕ್ಷೇತ್ರದಲ್ಲಿ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಅನೇಕ ಸಮಸ್ಯೆಗಳಿದ್ದು, ಈಗಾಗಲೇ ಕೈಗಾ ರಸ್ತೆ ವಿಸ್ತಿರ್ಣಕ್ಕೆ ರೂ. 22.5 ಕೋಟಿ ಹಣ ಅಭಿವೃದ್ಧಿ ಪಡಿಸಲು ನೀಡಲಾಗಿದ್ದು, ಜತೆಗೆ ನಗರಸಭೆ ಸಹಕಾರದಿಂದ ನಗರದ ರಸ್ತೆಗಳು ಹಾಗೂ ರೈಲ್ವೆ ನಿಲ್ದಾಣದ ವರೆಗೂ ಈಗಾಗಲೇ ಉತ್ತಮ ರಸ್ತೆ ನಿರ್ಮಾಣವಾಗಿದೆ. ಲೋಕೋಪಯೋಗಿ, ನಗರಸಭೆ ಕೈಗಾದ ವತಿಯಿಂದ ಜಂಟಿಯಾಗಿ ಕಾರವಾರದಿಂದ ಕೈಗಾವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದರಿಂದ ಎನ್.ಪಿ.ಸಿ.ಐ.ಎಲ್ ಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ತನ್ನ ಅವಧಿಯಲ್ಲಿ ಕಾರವಾರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಎನ್.ಪಿ.ಸಿ.ಐ.ಎಲ್ ಕೈಗಾದ ಸ್ಥಳ ನಿರ್ದೇಶಕ ವಿನೋದ್ ಕುಮಾರ್ ಅವರು ಮಾತನಾಡಿ, ಪ್ರತೀ ವರ್ಷ 10 ಕೋಟಿ ಗೂ ಅಧಿಕ ಮೊತ್ತವನ್ನು ಸಿಎಸ್ಆರ್ ನಿಧಿಯಿಂದ ಆರೋಗ್ಯ ಶಿಕ್ಷಣ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ವೆಚ್ಚ ಮಾಡುತ್ತಿದ್ದು, ಕೈಗಾ-ಇಳಕಲ್ ರಸ್ತೆಯ ಕೆರವಾಡಿಯಿಂದ ಕೈಗಾ ಕ್ರಾಸ್ ವರೆಗಿನ ರಸ್ತೆ ಅಗಲೀಕರಣಕ್ಕೆ ರೂ. 24.5 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಮತ್ತು ಶಾಸಕರು ಶಿಫಾರಸ್ಸು ಎಲ್ಲಾ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಂಕೋಲಾದಲ್ಲಿ ಮಂಗನಕಾಯಿಲೆ ನಿಯಂತ್ರಣ ಕಾರ್ಯಕ್ರಮಗಳಿಗೆ ಒಂದು ವಾಹನ ನೀಡುವಂತೆ ಕೈಗಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಎಚ್ಓ ಡಾ.ಶಂಕರ್ ರಾವ್, ಆರ್.ಸಿ.ಎಚ್. ಅಧಿಕಾರಿ ಡಾ.ನಟರಾಜ್, ಜಿಲ್ಲಾ ಮಲೇರಿಯಾಧಿಕಾರಿ ಡಾ.ರಮೇಶ್ ರಾವ್ , ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರ್ಷ , ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಲ್ಲಿಕಾರ್ಜುನ್, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ಎನ್.ಪಿ.ಸಿ.ಐ.ಎಲ್ ಕೈಗಾದ ಹೆಚ್ಚುವರಿ ಚೀಫ್ ಎಂಜಿನಿಯರ್ ಹಾಗೂ ಸಿಎಸ್ಆರ್ ನಿಧಿ ಅಧಿಕಾರಿ ತಿಪ್ಪೇಸ್ವಾಮಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.





