ಮಂಗಳೂರು: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳೆಯರು ರಾಜಕೀಯವಾಗಿ ಸಶಕ್ತರಾಗುವಂತೆ ಮಾಡಿದ್ದು ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಎಂದಿಗೂ ಕೂಡ ಮಹಿಳಾ ಮೀಸಲಾತಿ ವಿರೋಧಿಯಲ್ಲ. ಬಿಜೆಪಿ ಈ ದೇಶದ ಮಹಿಳೆಯರ ಪರವಾಗಿ ಎಂದಿಗೂ ನಿಂತಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಮಹಿಳೆಯೊಬ್ಬರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ , ರಾಷ್ಟ್ರಪತಿ, ಸ್ಪೀಕರ್ ಸ್ಥಾನ ನೀಡಿ ಗೌರವಿಸಿದ್ದು ಕೂಡ ಕಾಂಗ್ರೆಸ್ ಪಕ್ಷ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಮಹಿಳೆಯರು ರಾಜಕೀಯವಾಗಿ ಸದೃಢರಾಗಿ, ಆತ್ಮವಿಶ್ವಾಸದಿಂದ ಅಧಿಕಾರ ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದಕ್ಕೆ ಮೂಲ ತಳಹದಿ ಪಂಚಾಯತ್ರಾಜ್ ವ್ಯವಸ್ಥೆ, ಯಾವುದೇ ಪಕ್ಷ, ರಾಜಕೀಯ, ಜಾತಿ ಧರ್ಮವನ್ನು ನೋಡದೇ ಎಲ್ಲರಿಗೂ ಮೀಸಲಾತಿ ಜಾರಿಗೆ ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದರು.
ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ಮಸೂದೆ -2026′ ರ ಜತೆಗೆ ತರಾತುರಿಯಲ್ಲಿ ನಾರಿಶಕ್ತಿ ವಂದನಾ ಅಧಿನಿಯಮ ಮಸೂದೆ ಮಂಡಿಸುವ ಮೂಲಕ ವಿಧೇಯಕಕ್ಕೆ ಸೋಲಾಗಿದೆ. ಮಹಿಳಾ ಮೀಸಲು ಮಸೂದೆ ಪ್ರತ್ಯೇಕವಾಗಿ ಮಂಡಿಸಿದ್ದರೆ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಇದನ್ನು ಬೆಂಬಲಿಸುತ್ತಿತ್ತು. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ನಾರಿಶಕ್ತಿ ವಂದನಾ ಮಸೂದೆ ಪ್ರತ್ಯೇಕವಾಗಿ ಮಂಡಿಸಿ, ಇದನ್ನು ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಕೇಂದ್ರ ಸರಕಾರ ತಮ್ಮ ದೌರ್ಬಲ್ಯ, ಲೋಪದೋಷಗಳನ್ನು ಮುಚ್ಚಿಕೊಳ್ಳುವುದಕ್ಕೆ ಕಾಂಗ್ರೆಸ್ ಮೇಲೆ ವಿನಾಕಾರಣ ಗೂಭೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ದುರ್ಬಲ ಹಾಗೂ ಸಮಾಜದ ತುಳಿತಕ್ಕೆ ಒಳಗಾದ ಜನರಿಗೆ ಮೀಸಲಾತಿ ನೀಡುವ ಮೂಲಕ ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದು ಕಾಂಗ್ರೆಸ್. ರಾಜ್ಯದಲ್ಲಿಯೂ ಕೂಡ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಆರ್ಥಿಕ ಹಾಗೂ ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದರು.
ಶುಭೋದಯ ಆಳ್ವ, ಅಪ್ಪಿ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸೇರಿದಂತೆ ಹಲವರು ಇದ್ದರು.





