ಸಂಸದ ಕ್ಯಾ. ಚೌಟ ಭೇಟಿ ಮಾಡಿದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ, ದ.ಕ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚೆ

2005 1

ಮಂಗಳೂರು : ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ , ಪ್ರವಾಸೋದ್ಯಮ ಸಹಿತ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಪೂರಕವಾದ ವಿವಿಧ ವಿಚಾರವಾಗಿ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಅವರನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.

ಸೋಮವಾರ ಮಂಗಳೂರಿಗೆ ಭೇಟಿ ನೀಡಿದ ಕಾನ್ಸುಲ್ ಜನರಲ್ ಅವರೊಂದಿಗೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಕನ್ನಡ ಎರಡೂ ಕಡೆ ವಿಸ್ತಾರವಾದ ಕರಾವಳಿ ಪ್ರದೇಶ ಹೊಂದಿರುವುದರಿಂದ, ಸಾಹಸಮಯ ವಾಟರ್‌ ಸ್ಪೋರ್ಟ್ಸ್‌ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಸಮಾಲೋಚಿಸಲಾಯಿತು. ಪ್ರಮುಖವಾಗಿ, ಆಸ್ಟ್ರೇಲಿಯಾದ ತಾಂತ್ರಿಕ ನೈಪುಣ್ಯತೆ ಮತ್ತು ಈ ಕ್ಷೇತ್ರದಲ್ಲಿ ಅವರಿಗಿರುವ ದಶಕಗಳ ಅನುಭವವನ್ನು ನಮ್ಮ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪರಸ್ಪರ ಚರ್ಚಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಯುವಜನತೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳೊಂದಿಗೆ ಕ್ರೀಡಾ ಪಠ್ಯಕ್ರಮ ಅಭಿವೃದ್ಧಿಗಾಗಿ ಸಹಭಾಗಿತ್ವ ಹೊಂದುವ ಕುರಿತು ಕೂಡ ಇದೇವೇಳೆ ಚರ್ಚಿಸಲಾಯಿತು.

ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಕಾನ್ಸಲ್ ಜನರಲ್ ಅವರು ಸಂಸದ ಕ್ಯಾ. ಚೌಟ ಅವರಿಗೆ ಸ್ಮರಣಿಕೆಯಾಗಿ ಲೆದರ್ ಬಾಲ್ ಅನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಕ್ಯಾ. ಚೌಟ ಅವರು ಇಂತಹ ಉಪಕ್ರಮಗಳು ಎರಡು ದೇಶಗಳ ನಡುವಿನ ಸಂಬಂಧ ಗಟ್ಟಿಗೊಳಿಸುವುದಲ್ಲದೆ ನಮ್ಮ ಯುವಜನತೆಗೆ ಜಾಗತಿಕ ಮಟ್ಟದ ಕೌಶಲ್ಯ ಮತ್ತು ಮಾನ್ಯತೆಯನ್ನು ಒದಗಿಸುವ ಮೂಲಕ ಹೊಸ ಹಾದಿ ತೆರೆಯಲಿವೆ. ಅಲ್ಲದೆ ಇದು ಆರ್ಥಿಕ ಪ್ರಗತಿಯ ಜೊತೆಗೆ ‘ವಿಕಸಿತ ಭಾರತ’ದ ದೃಷ್ಟಿಕೋನಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma