ಪುತ್ತೂರು: ಫೋನ್ ಕರೆಯ ಸಂಭಾಷಣೆ ವೇಳೆ ರಂಗಭೂಮಿ, ತುಳು ಚಿತ್ರ ಕಲಾವಿದರೊಬ್ಬರ ಕುರಿತು ಅವಹೇಳನಕಾರಿ ಹಾಗೂ ಕೀಳು ಮಟ್ಟದ ಶಬ್ಧಗಳಿಂದ ನಿಂದನೆ ಮಾಡಿ, ಬೆದರಿಕೆ ಹಾಕಿದ ಆರೋಪದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಮಂದಾರ ನಿವಾಸಿ, ರಂಗಭೂಮಿ ಕಲಾವಿದ ಸುಂದರ ರೈ ಅವರು ನೀಡಿರುವ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ನೇಹಿತ ದಿನೇಶ್ ಕೊಡಪದವು ಅವರು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಧ್ವನಿ ಮುದ್ರಿಕೆಯನ್ನು ಇದೇ 12ರಂದು ಕೇಳಿದ್ದು, ಅದರಲ್ಲಿ ಗುರುವಾಯನಕೆರೆ ಪ್ರಜ್ವಲ್ ಹಾಗೂ ಮಹೇಶ್ ಶೆಟ್ಟಿ ನಡುವಿನ ಫೋನ್ ಸಂಭಾಷಣೆ ಅದಾಗಿದೆ. ಈ ಸಂಭಾಷಣೆಯಲ್ಲಿ ಮಹೇಶ್ ಶೆಟ್ಟಿ ಅವರು ದಿನೇಶ್ ಕೊಡಪದವು ಹಾಗೂ ಮಂದಾರ ಸುಂದರ್ ರೈ ಎಂಬುವವರ ಹೆಸರುಗಳನ್ನು ಪ್ರಸ್ತಾಪಿಸಿ ಕೀಳು ಮಟ್ಟದ ಪದಗಳಿಂದ ನಿಂದಿಸಿ ಅವಹೇಳನ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ ತನ್ನ ತಾಯಿ-ಪತ್ನಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಟ್ಟದಾಗಿ ಮಾತನಾಡಿ ತೇಜೋವಧೆ ಮಾಡಿದ್ದಾರೆ. ನನ್ನ ಹೆಸರು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಜಾತಿ ವೈಷಮ್ಯ, ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವಂತೆ ಕುಮ್ಮಕ್ಕು ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.





