ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಟೋ ಇಮ್ಯೂನ್ ಕಾಯಿಲೆಗೆ ಯಶಸ್ವಿ ಚಿಕಿತ್ಸೆ

ಕೆಎಂಸಿ

ಮಂಗಳೂರು: ಇಲ್ಲಿನ ಕೆಎಂಸಿ ಅತ್ತಾವರ ಆಸ್ಪತ್ರೆಯ ವೈದ್ಯರು, ತೀವ್ರ ಸೋಂಕಿನಿಂದ ಜಟಿಲಗೊಂಡಿದ್ದ ಅಪರೂಪದ ಮತ್ತು ಪ್ರಾಣಾಪಾಯಕಾರಿ ರುಮಟಲಾಜಿಕಲ್ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.

ರೋಗಿಯು ಲ್ಯೂಪಸ್ ಎಂಬ ಅಪರೂಪದ ಅಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಶೀಘ್ರಗತಿಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಆರ್‌ಪಿಜಿಎನ್ ಮತ್ತು ಶ್ವಾಸಕೋಶದಲ್ಲಿ ಜೀವಕ್ಕೆ ಕಂಟಕ ಆಗುವಂತಹ ಮರುಕಳಿಸುವ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ತಿಂಗಳುಗಳ ಕಾಲ ರೋಗಿ ಸ್ಥಿತಿ ಗಂಭೀರ ಆಗಿದ್ದು, ದೇಹದ ಹಲವು ಅಂಗಾಂಗಗಳ ಮೇಲೆ ಪರಿಣಾಮ ಬೀರಿದ ಸವಾಲಿನ ವೈದ್ಯಕೀಯ ಸ್ಥಿತಿಯನ್ನು ಅವರು ಎದುರಿಸಿದ್ದರು.

ಚಿಕಿತ್ಸೆ ಅವಧಿಯಲ್ಲಿ ರೋಗಿಗೆ ಶ್ವಾಸಕೋಶದ ಮ್ಯೂಕರ್ ಮೈಕೋಸಿಸ್ ಎಂಬ ತೀವ್ರ ಶೀಲೀಂದ್ರ ಸೋಂಕು ತಗುಲಿತ್ತು. ಇದಕ್ಕೆ ಸತತ ನಾಲ್ಕು ವಾರಗಳ ಕಾಲ ಇಂಟ್ರಾವೆನಸ್ ಅಂಫೊಟೆರಿಸಿನ್ ಬಿ ಎಂಬ ತೀವ್ರ ಆ್ಯಂಟಿ ಫಂಗಲ್ ಚಿಕಿತ್ಸೆಯ ಅಗತ್ಯ ಇತ್ತು. ಒಂದು ಕಡೆ ಅಟೋ ಇಮ್ಯೂನ್ ಕಾಯಿಲೆಯ ನಿಯಂತ್ರಣಕ್ಕಾಗಿ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಚಿಕಿತ್ಸೆ ನೀಡಬೇಕಿತ್ತು, ಮತ್ತೊಂದೆಡೆ ಮಾರಣಾಂತಿಕ ಸೋಂಕ ಅನ್ನು ಎದುರಿಸಬೇಕಿತ್ತು. ಈ ಎರಡೂ ಪರಸ್ಪರ ವಿರುದ್ಧವಾದ ಸ್ಥಿತಿಗಳನ್ನು ಸಮತೋಲನಗೊಳಿಸುವುದು ವೈದ್ಯಕೀಯ ತಂಡಕ್ಕೆ ದೊಡ್ಡ ಸವಾಲಾಗಿತ್ತು ಎಂದು ಆಸ್ಪತ್ರೆಯ ವೈದ್ಯರ ತಂಡವು ತಿಳಿಸಿದೆ.

ಕೆಎಂಸಿ ಅತ್ತಾವರದ ರುಮಟಾಲಜಿ ವಿಭಾಗದ ತಜ್ಞರು, ನೆಫ್ರಾಲಜಿ ತಂಡ ಮತ್ತು ಸೋಂಕು ತಡೆ ಸೇವೆಗಳ ಸಹಯೋಗದಲ್ಲಿ ಈ ಪ್ರಕರಣವನ್ನು ಸಮರ್ಥವಾಗಿ ನಿರ್ವಹಿಸಿದರು. ರೋಗಿ ಚೇತರಿಕೆಗಾಗಿ ಹಲವು ಬಾರಿ ಪ್ಲಾಸ್ಮಾ ಬದಲಾವಣೆ , ರಿಟುಕ್ಸಿಮಾಬ್ ಥೆರಪಿ , ಐವಿಐಜಿ ಮತ್ತು ಅತ್ಯಂತ ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಲಾದ ಕಾರ್ಟಿಕೊಸ್ಟೆರಾಯ್ಡ್ ಚಿಕಿತ್ಸೆಗಳನ್ನು ನೀಡಲಾಯಿತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ದೀರ್ಘಕಾಲದ ತೀವ್ರ ಚಿಕಿತ್ಸೆಯ ನಂತರ, ರೋಗಿ ಮೂತ್ರಪಿಂಡದ ಕಾರ್ಯಕ್ಷಮತೆ ಸ್ಥಿರಗೊಂಡಿದ್ದು, ಶ್ವಾಸಕೋಶದ ಸಮಸ್ಯೆ ಮತ್ತು ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ ರೋಗಿಯು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಂಕೀರ್ಣವಾದ ಅಟೋಇಮ್ಯೂನ್ ಮತ್ತು ಉರಿಯೂತದ ಕಾಯಿಲೆಗಳಿಗೆ ಕೆಎಂಸಿ ಅತ್ತಾವರದ ರುಮಟಾಲಜಿ ವಿಭಾಗವು ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma