ಮಂಗಳೂರು: ನಗರದ ದೇರೆ ಬೈಲ್,ಕೊಂಚಾಡಿ ಮಾಲೆಮಾರ್ ಆಟೋ ಪಾರ್ಕ್ನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ರಿಕ್ಷಾ ನಿಲ್ದಾಣದ ಚಾವಣಿ ಹಾಗೂ ದಾನಿಗಳ ಸಹಕಾರದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಚಾವಣಿಯನ್ನು ಉದ್ಘಾಟಿಸಿ ಮಾತನಾಡಿ, ಆಟೋ ರಿಕ್ಷಾ ಚಾಲಕರು ಪ್ರಯಾಣಿಕರೊಂದಿಗೆ ಉತ್ತಮವಾಗಿ ನಡೆದುಕೊಂಡರೆ, ಈ ಊರಿನ ಸಂಸ್ಕೃತಿ ಮತ್ತು ವ್ಯವಸ್ಥೆಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದರು.
ತುರ್ತು ಸಂದರ್ಭಗಳಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಸೇರಿದಂತೆ ಅಗತ್ಯವಿರುವವರಿಗೆ ಉಚಿತವಾಗಿ ಸಹಾಯ ಮಾಡುವ ಮೂಲಕ ಚಾಲಕರು ಮಾನವೀಯತೆ ತೋರಿಸುತ್ತಿರುವುದು ಶ್ಲಾಘನೀಯ. ತಮ್ಮ ದುಡಿಮೆಯ ನಡುವೆ ಬಿಸಿಲು, ಮಳೆಯಿಂದ ವಿಶ್ರಾಂತಿ ಪಡೆಯಲು ಚಾವಣಿಯಂತಹ ಸೌಲಭ್ಯ ಅಗತ್ಯವಾಗಿದ್ದು, ಚಾಲಕರ ಬೇಡಿಕೆಗೆ ಸ್ಪಂದಿಸಿ ಇದನ್ನು ನಿರ್ಮಿಸಲಾಗಿದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ಆಟೋ ರಿಕ್ಷಾ ಚಾಲಕರು ಒಂದು ಊರಿನ ರಾಯಭಾರಿಗಳಂತೆ ಕಾರ್ಯನಿರ್ವಹಿಸುತ್ತಾರೆ. ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅವರು ಶುದ್ಧ ಕುಡಿವ ನೀರಿನ ಘಟಕವನ್ನು ಒದಗಿಸಿದ್ದು, ಇದನ್ನು ಉದ್ಘಾಟಿಸಲಾಯಿತು. ಆಟೋ ರಿಕ್ಷಾ ಸಂಘದ ವತಿಯಿಂದ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು.
ಮಂಡಲ ಉಪಾಧ್ಯಕ್ಷ ರಾಜೇಶ್ ಕೊಂಚಾಡಿ, ಬಿಜೆಪಿ ಮುಖಂಡ ಚರಿತ್ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ, ಮಾಜಿ ಮಹಾ ನಗರಪಾಲಿಕೆ ಸದಸ್ಯರಾದ ರಂಜನಿ ಎಲ್ ಕೋಟ್ಯಾನ್, ಗಾಯತ್ರಿ ರಾವ್, ವಾರ್ಡ್ 23 ಅಧ್ಯಕ್ಷ ರಾಘು ಭಟ್, ಕಾವೂರು ಪೊಲೀಸ್ ಠಾಣೆಯ ಸಿ ಐ ರಾಘವೇಂದ್ರ ಭೈಂದೂರು, ಉದ್ಯಮಿ ಝೆವಿರ್ ಸುನಿಲ್ ಸೇರಿದಂತೆ ಇದ್ದರು.
ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಎಂ.ಪಿ. ಪರಮೇಶ, ಪ್ರಧಾನ ಕಾರ್ಯದರ್ಶಿ ತಿಲಕ್ ದೇವಾಡಿಗ, ಗೌರವಾಧ್ಯಕ್ಷ ಚಂದ್ರಶೇಖರ್ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯುತ್ ವ್ಯವಸ್ಥೆಯನ್ನು ಸುನಿಲ್ ಅವರ ಸಹಕಾರದಲ್ಲಿ ಒದಗಿಸಲಾಗಿದ್ದು, ಸ್ಥಳೀಯ ಉದ್ಯಮಿಗಳು ರಿಕ್ಷಾ ಪಾರ್ಕ್ ವ್ಯವಸ್ಥಿತವಾಗಿರಲು ಸಹಕಾರ ನೀಡಿದರು. ಕಾರ್ಯಕ್ರಮವನ್ನು ಗೌರೀಶ್ ನಿರೂಪಿಸಿದರು.





