ಮಂಗಳೂರು: ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಆಗಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮಕ್ಕಳಿಗಾಗಿ ಬೇಸಿಗೆ ಬ್ಯಾಡ್ಮಿಂಟನ್ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಹೇಳಿದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ದಕ್ಷಿಣ ಕನ್ನಡದ ಸಹಭಾಗಿತ್ವದಲ್ಲಿ 2 ತಿಂಗಳ ಕಾಲ ನಡೆಯುವ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉರ್ವ ಒಳಾಂಗಣ ಕ್ರೀಡಾಂಗಣವು ಬ್ಯಾಡ್ಮಿಂಟನ್ ಕ್ರೀಡೆಗೆ ಸುಸಜ್ಜಿತ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಇದ್ದು, ಸುಮಾರು 60 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಡ್ಮಿಂಟನ್ ಸಾಕಷ್ಟು ಪ್ರತಿಭೆಗಳು ಕರಾವಳಿಯಲ್ಲಿ ಇದ್ದು, ಇಂತಹ ಪ್ರತಿಭೆಗಳಿಗೆ ಮತ್ತಷ್ಟು ವೇದಿಕೆ ನೀಡುವ ಸಲುವಾಗಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜನೆ ಮಾಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಉದ್ಘಾಟನೆಯನ್ನು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕ್ರೀಡಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಪ್ರಸಾದ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅಶೋಕ್ ಪೂವೈ, ಕದ್ರಿ ಐವನ್ ಪಿಂಟೋ ಹಾಗೂ ಅಸೋಸಿಯೇಷನ್ ಉಪಾಧ್ಯಕ್ಷ ಅಶೋಕ್ ಹೆಗಡೆ, ಸಮಿತಿ ಸದಸ್ಯರಾದ ನೂರು ಮಹಮ್ಮದ್ ಇದ್ದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ 17 ವರ್ಷದೊಳಗಿನ ಆಟಗಾರರಾದ ಸಾನ್ವಿ,ಆದಿತ್ಯ, ಕಿಯನ್ ಪಿ.ಸಿ, ಅನನ್ಯಾ , ಅವಿನಾಶ್, ಕನಿಶ್ ಅವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ 90 ಮಕ್ಕಳು ಭಾಗವಹಿಸಿದ್ದರು. ಕಾರ್ಯದರ್ಶಿ ಸುಪ್ರೀತ್ ಆಳ್ವ ವಂದಿಸಿದರು. ಸಮಿತಿಯ ಸದಸ್ಯರಾದ ಡಾ. ಶರತ್ ನಿರೂಪಿಸಿದರು.





