ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2025-26 ನೇ ಸಾಲಿನಲ್ಲಿ ರೂಪಾಯಿ 1,270 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವರ್ಷದಲ್ಲಿ ರೂಪಾಯಿ 1,174 ಕೋಟಿ ವ್ಯವಹಾರ ನಡೆಸಿದ್ದು, ಶೇ 8.18 ರಷ್ಟು ಅಭಿವೃದ್ಧಿ ದಾಖಲಿಸಿತ್ತು. ಈ ಬಾರಿ 10.16 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2025-26 ನೇ ಸಾಲಿನಲ್ಲಿ ಹಾಲು ಶೇಖರಣೆ ಸರಾಸರಿ ದಿನ ವಹಿ 4.07 ಲಕ್ಷ ಲೀಟರ್ ಇದ್ದು, 2024-25 ನೇ ಸಾಲಿಗೆ ಹೋಲಿಸಿದಲ್ಲಿ ಶೇ19 ರಷ್ಟು ಪ್ರಗತಿ ಆಗಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 51,693 ಸಂಖ್ಯೆಯ ಸಕ್ರಿಯ ಸದಸ್ಯರನ್ನು ಹೊಂದಿದೆ ಎಂದರು.

2025-26ನೇ ಸಾಲಿನಲ್ಲಿ ಅಂದಾಜು ರೂಪಾಯಿ 10.61 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದ್ದು, ಕಳೆದ ಸಾಲಿನ ನಿವ್ವಳ ಲಾಭ ರೂಪಾಯಿ 12.79 ಕೋಟಿ ಗಳಿಸಿತ್ತು. ಆದರೆ ಹೈನುಗಾರರು ಸರಬರಾಜು ಮಾಡಿದ ಹಾಲಿಗೆ ಅನುಗುಣವಾಗಿ ಲೀಟರ್ ಒಂದಕ್ಕೆ ಈಗಾಗಲೇ ರೂಪಾಯಿ 1.50 ಪ್ರೋತ್ಸಾಹಧನ ರೂಪದಲ್ಲಿ ನೀಡುತ್ತಿದ್ದು, ಫೆ, 21 ರಿಂದ ಮೇ 31, 2026 ರವರೆಗೆ ಪುನಃ ವಿಶೇಷ ಪ್ರೋತ್ಸಾಹಧನವಾಗಿ ರೂ. 1 ಅನ್ನು ಸೇರಿ ಒಟ್ಟು ರೂಪಾಯಿ 2.50 ಅನ್ನು ಲೀಟರ್ ಒಂದಕ್ಕೆ ಹೆಚ್ಚುವರಿ ದರದೊಂದಿಗೆ ಸಾಲಿನಲ್ಲಿ ಒಟ್ಟು 23.99 ಕೋಟಿಗಳಷ್ಟು ಪ್ರೋತ್ಸಾಹಧನವಾಗಿ ನೀಡಲಾಗಿದೆ. ಹೈನುಗಾರಿಕೆಗೆ ಪೂರಕವಾದ ವಿವಿಧ ಯೋಜನೆಗಳಾದ ಮಿನಿ ಡೇರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಘಟಕ ಯೋಜನೆ, ಹಸಿರು ತಾಕು ಸ್ಥಾಪನೆ, ಹೊರ ರಾಜ್ಯದಿಂದ ರಾಸು ಖರೀದಿ, ಕರು ಸಾಕಾಣಿಕಾ ಯೋಜನೆಗಾಗಿ ಅನುದಾನಗಳ ರೂಪದಲ್ಲಿ ರೂಪಾಯಿ 6.64 ಕೋಟಿ ನೀಡಲಾಗಿದೆ ಎಂದರು.
ಹಾಲು ಶೇಖರಣೆ ಅಭಿವೃದ್ಧಿಗಾಗಿ 2026-27 ನೇ ಸಾಲಿನಲ್ಲಿ ಯೋಜನೆಗಳೊಂದಿಗೆ ಕಡಿಮೆ ಅಭಿವೃದ್ಧಿ ಯೋಜನೆಗಾಗಿ ರೂಪಾಯಿ 60 ಲಕ್ಷಗಳನ್ನು ಕಾಯ್ದಿರಿಸಿದ್ದು,ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಒಕ್ಕೂಟದ ವ್ಯಾಪ್ತಿಯಲ್ಲಿ 1,781 ಸಕ್ರಿಯ ಡೀಲರ್ ಗಳಿದ್ದು, 42 ಪಾರ್ಲರ್ , 91 ಫ್ರಾಂಚೈಸಿ, 15 ಟಿಸಿಡಿಗಳ ಮುಖಾಂತರ 2025-26ರ ಸಾಲಿನಲ್ಲಿ ದಿನ ವಹಿ ಸರಾಸರಿ ಹಾಲು ಮಾರಾಟ 3,87,360 ಲೀಟರ್, ಮೊಸರು ಮಾರಾಟ 81,979 ಕೆ.ಜಿ, ಪನೀರ್ 2.8 ಟನ್, ತುಪ್ಪ 6.1 ಟನ್, ವಿವಿಧ ಸಿಹಿ ಉತ್ಪನ್ನ 850 ಕೆ.ಜಿ, ಸುವಾಸಿತ ಹಾಲು 2,000 ಲೀಟರ್, ಮಜ್ಜಿಗೆ 5,043 ಲೀಟರ್ ಮತ್ತು ಲಸ್ಸಿ 4,250 ಲೀಟರ್ಗಳನ್ನು ಮಾರಾಟ ಮಾಡಿ ದಿನವಹಿ ರೂಪಾಯಿ 3.03 ಕೋಟಿ ಮಾರಾಟ ವ್ಯವಹಾರ ಮಾಡಲಾಗುತ್ತಿದೆ ಎಂದರು.
ಒಕ್ಕೂಟದಲ್ಲಿ ಹೊಸ ತಂತ್ರಜ್ಞಾನದ ಯಂತ್ರೋಪಕರಣಗಳನ್ನು, ನೂತನ ಗೋದಾಮು, ಐಸ್ ಕ್ರೀಂ ಕೋಲ್ಡ್ ಸ್ಟೋರೇಜ್, ನವೀಕರಿಸಿದ ರೆಫ್ರಿಜರೇಷನ್ ಘಟಕವನ್ನು ರೂ.12.81 ಕೋಟಿಗಳಲ್ಲಿ ನಿರ್ಮಿಸಿ ಬಳಸಲಾಗುತ್ತಿದೆ. ಮಂಗಳೂರು ಕೇಂದ್ರ ಕಚೇರಿಯಲ್ಲಿ ರೂಪಾಯಿ 7 ಕೋಟಿ ವೆಚ್ಚದಲ್ಲಿ ನೂತನ ಗೋದಾಮು ಮತ್ತು ಉಡುಪಿ ಡೇರಿಯಲ್ಲಿ ರೂಪಾಯಿ 4.25 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣ ಪ್ರಗತಿ ಹಂತದಲ್ಲಿದ್ದು, ಈ ಸಾಲಿನಲ್ಲಿ ಉದ್ಘಾಟನೆಗೊಳ್ಳಲಿದೆ. ಮೆಗಾ ಡೇರಿ, ಐಸ್ ಕ್ರೀಂ ಪ್ಲ್ಯಾಂಟ್, ಪನೀರ್ ಘಟಕ, ನೀರು ಬಾಟ್ಲಿಂಗ್ ಘಟಕಗಳ ಸ್ಥಾಪನೆಗೆ ಆಡಳಿತ ಮಂಡಲಿ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿವೇಕ, ನಿರ್ದೇಶಕರಾದ ಸುಚರಿತ ಶೆಟ್ಟಿ, ಚಂದ್ರಶೇಖರ್, ಮಮತಾ ಶೆಟ್ಟಿ, ವ್ಯವಸ್ಥಾಪಕ ರವಿರಾಜ ಉಡುಪ ಇದ್ದರು.





