ಬೆಳ್ತಂಗಡಿ: ತೀವ್ರ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಯುವತಿಯರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಇವರಿಬ್ಬರ ಸಾವಿಗೆ ವಿಷ ಪದಾರ್ಥ ಸೇವನೆಯೇ ಕಾರಣ ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ತಾಲ್ಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬುವವರ ಪುತ್ರಿ ರಕ್ಷಿತಾ (22) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದು, ಅವರ ಪಕ್ಕದ ಮನೆಯವರಾದ ಶ್ರೀನಿವಾಸ ಆಚಾರ್ಯ ಎಂಬುವವರ ಪುತ್ರಿ ಲಾವಣ್ಯಾ (21) ಸುರತ್ಕಲ್ ಆಸ್ಪತ್ರೆಯಲ್ಲಿ ಮಧ್ಯಾಹ್ನ ಮೃತಪಟ್ಟದಿದ್ದಾರೆ. ಇಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಏಪ್ರಿಲ್ 4 ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ಮನೆಯಲ್ಲಿ ಹೊಟ್ಟೆ ನೋವಿನಿಂದ ತೀವ್ರ ಅಸ್ವಸ್ಥರಾಗಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಬಳಿಕ ರಕ್ಷಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಮನೆಯವರು ದಾಖಲು ಮಾಡಿದ್ದರು.
ಲಾವಣ್ಯ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು, ವೈದ್ಯರ ಸಲಹೆ ಮೇರೆಗೆ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿನ ಕಾರಣ ಸ್ಪಷ್ಟವಾಗಿ ಕಾರಣ ತಿಳಿದು ಬಂದಿಲ್ಲ. ವಿಷ ಸೇವನೆಯೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ವರದಿ, ಪೊಲೀಸ್ ತನಿಖೆಯಿಂದ ಮಾಹಿತಿ ತಿಳಿಯಬೇಕಷ್ಟೇ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.