ಪುತ್ತೂರು: ಕೊರಟಗೆರೆಯಲ್ಲಿ ನನ್ನ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ನಾನು ಕೇಳಿದ್ದ ವೇಳೆ ಡಾ. ಪರಮೇಶ್ವರ್ ಹೇಳಿದ್ರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೊಸ ಬಾಂಬ್ ಹಾಕಿದ್ದಾರೆ.
ಪುತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ್ ಅವರ ಸೋಲಿಗೆ ಕಾರಣ ಏನು ಎಂದು ಸ್ವತಃ ನಾನೇ ಅವರ ಬಳಿ ಕೇಳಿದ್ದೆ. ಆಗ ಅವರು ಸಿದ್ಧರಾಮಯ್ಯ ಅವರತ್ತ ಬೆರಳು ತೋರಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಸೋತಾಗಲೂ ನಾನು ಸೋಲಿಗೆ ಕಾರಣ ಏನು ಎಂದು ಸಿದ್ಧರಾಮಯ್ಯ ಬಳಿ ಪ್ರಶ್ನಿಸಿದ್ದೆ. ಸಿದ್ಧರಾಮಯ್ಯ ಅವರು ಪರಮೇಶ್ವರ ಅವರ ಕಡೆ ಬೊಟ್ಟು ಮಾಡಿದ್ದರು. ಹೀಗೆ ಬೆನ್ನಿಗೆ ಚೂರಿ ಹಾಕುವ ಪ್ರವೃತ್ತಿ ಇರುವುದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ಈಶ್ವರಪ್ಪ ತಿಳಿಸಿದರು.
ಭಾಷಣದುದ್ದಕ್ಕೂ ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಈಶ್ವರಪ್ಪ, ಗೋಹತ್ಯೆ ನಿಷೇಧ, ಮತಾಂತರ ಕಾಯ್ದೆಯನ್ನು ಬಿಜೆಪಿ ಸರಕಾರ ತಂದಿರುವುದೇ ತಪ್ಪು ಎನ್ನುವ ಸಿದ್ಧರಾಮಯ್ಯ ತಾಕತ್ತಿದ್ದರೆ ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಗೋ ಹತ್ಯೆಗೆ ಅವಕಾಶ, ಮತಾಂತರ ನಿಷೇಧ ರದ್ದು ಎಂದು ಸೇರ್ಪಡೆ ಮಾಡಲಿ ಎಂದರು. .