ಉಡುಪಿ: ಮಹಿಳಾ ಸಬಲೀಕರಣ, ಹಕ್ಕುಗಳ ರಕ್ಷಣೆ, ತಾರತಮ್ಯದ ನಿರ್ಮೂಲನೆ ಮತ್ತು ಸಮಾಜದಲ್ಲಿ ಮಹಿಳೆಯರ ಕೊಡುಗೆ ಸ್ಮರಿಸುವುದು ಮಹಿಳಾ ದಿನದ ಪ್ರಮುಖ ಉದ್ದೇಶ ಆಗಿದೆ. ಈ ನಿಟ್ಟಿನಲ್ಲಿ ಮಹಿಳೆಯನ್ನು ಗೌರವದಿಂದ ಕಾಣಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದು ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಎಚ್ ಅಶೋಕ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಮಿಕ ರೋಗಗಳ ಘಟಕ ಎನ್.ಸಿ.ಡಿ, ಜಿಲ್ಲಾ ಆಸ್ಪತ್ರೆ ಉಡುಪಿ ಎನ್.ಸಿ.ಡಿ ವಿಭಾಗ ಹಾಗೂ ವಾಮನ ವಿಠ್ಠಲ ಟ್ರಸ್ಟ್ ಶಿರೂರು ಮಠ ಉಡುಪಿ ಜಿಲ್ಲೆಆಶ್ರಯದಲ್ಲಿ ಮಂಗಳವಾರ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವ ಮಹಿಳಾ ದಿನವನ್ನು ಆಚರಿಸಲಾಗುತ್ತಿದ್ದು, ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸಲು ಹಾಗೂ ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆಸ್ಪತ್ರೆಯ ರೇಡಿಯೋಲಾಜಿಸ್ಟ್ ಡಾ.ಆಮ್ನಾ ಹೆಗ್ಡೆ ಅವರು ಮಾತನಾಡಿ, ಈ ಹಿಂದೆ ಅಬಲೆ ಎಂದು ಕರೆಸಿಕೊಳ್ಳುತ್ತಿದ್ದ ಮಹಿಳೆಯರು ಇಂದು ಸಬಲೆಯಾಗಿ, ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆ, ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನರಾಗಿ ಸ್ಥಾನ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ. ಉಷಾ ಹಾಗೂ ನರ್ಸಿಂಗ್ ಅಧಿಕಾರಿ ಅರುಣ ಅವರು ಮಹಿಳಾ ದಿನದ ಕುರಿತು ಮತಾನಾಡಿದರು.
ವೈದ್ಯಕೀಯ ತಜ್ಞ ಡಾ.ದೆಯಮಣಿ, ಡಾ. ದಿವ್ಯಾ, ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ವೀಣಾ ಕುಮಾರಿ, ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ ಹಂಗ್ರೀ ಫೌಂಡೇಷನ್ ನಿಧಿ, ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ರತ್ನಾವತಿ ಸೇರಿದಂತೆ ಹಲವರು ಇದ್ದರು.
ಎನ್.ಸಿ.ಡಿ ಯ ಜಿಲ್ಲಾ ಸಮಾಲೋಚಕಿ ಡಾ.ಅಂಜಲಿ ಹಾಗೂ ಆಪ್ತ ಸಮಾಲೋಚಕ ಮನು. ಎಸ್. ನಿರೂಪಿಸಿದರು.
ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು. ಮಹಿಳಾ ದಿನದ ಅಂಗವಾಗಿ ಆಸ್ಪತ್ರೆ ಎಲ್ಲ ಸಿಬ್ಬಂದಿಗೆ ಉಡುಪಿ ವಾಮನ ವಿಠ್ಠಲ ಟ್ರಸ್ಟ್ ಶಿರೂರು ಮಠ ದಿಂದ ಬೆಳಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್ ಚಂದ್ರಶೇಖರ ಅವರು ಜಿಲ್ಲಾ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲಂಚ್ ಬಾಕ್ಸ್ ಉಡುಗೊರೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗೆ ಮಾಕ್ಸ್ ಫುಡ್ ಫಾರ್ ದಿ ಹಂಗರಿ ಫೌಂಡೇಷನ್ ನಿಂದ ಪ್ರಾಣಿಕ್ ಹೀಲಿಂಗ್ ಮೆಡಿಟೇಸನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.



