ಕಾರವಾರ: ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನ ಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 18 (1) ಅಡಿಯಲ್ಲಿ 5 ಪ್ರಕರಣ ಮತ್ತು 28 ಬಿ ಅಡಿಯಲ್ಲಿನ 112 ಪ್ರಕರಣಗಳಿಗೆ ಒಟ್ಟು 27. 70 ಕೋಟಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಇವುಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿದ 35 ಪ್ರಕರಣಗಳಲ್ಲಿನ ಫಲಾನುಭವಿಗಳಿಗೆ 6.87 ಕೋಟಿ ಪರಿಹಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ನಂತರ ಅವರು ಮಾತನಾಡಿ, ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಪರಿಹಾರದ ಮೊತ್ತ ಪಾವತಿಗೆ ಇರುವ ಸಮಸ್ಯೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದು, ಅದರಂತೆ ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ಸಚಿವರು ನೇಮಕ ಮಾಡಿದ ನಂತರ ಪರಿಹಾರದ ಮೊತ್ತ ಬಿಡುಗಡೆ ಕಾರ್ಯ ಶೀಘ್ರಗೊಂಡಿದ್ದು, ಇದೂವರೆಗೆ 35 ಕೋಟಿ
ಬಿಡುಗಡೆಗೊಂಡಿದೆ. ಬಾಕಿ ಉಳಿದಿರುವ 215 ಪ್ರಕರಣಗಳಿಗೆ ಬಿಡುಗಡೆಯಾಗಬೇಕಾದ 28.82 ಕೋಟಿ ಮೊತ್ತ ಕೂಡ ತ್ವರಿತಗತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಗಳು ಉತ್ತಮವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 52 ರ ಹೊಸಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ವರೆಗಿನ ರಸ್ತೆ ಅಭಿವೃದ್ದಿಗೆ 101 ಕೋಟಿ ಅನುದಾನ ಮಂಜೂರಾಗಿದೆ. ಕೊಂಕಣ ರೈಲ್ವೆಯಲ್ಲಿ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳ ಕುರಿತು ವಿಚಾರಣೆ ತ್ವರಿತಗತಿಯಲ್ಲಿ ನಡೆಯುತಿದ್ದು, ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದ ಅವರು, ಪ್ರಸ್ತುತ ಸೀಬರ್ಡ್ ಸಂತ್ರಸ್ಥರು ತಮಗೆ ದೊರೆತಿರುವ ಪರಿಹಾರದ ಮೊತ್ತವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಾತನಾಡಿ, ಸೀಬರ್ಡ್ ಯೋಜನೆಗಾಗಿ ಒಟ್ಟು 2400 ಎಕರೆ ಖಾಸಗಿ ಜಮೀನ ಅನ್ನು ಮತ್ತು 7000 ಎಕರೆ ಅರಣ್ಯ ಜಮೀನ ಅನ್ನು ಸ್ವಾಧೀನಪಡಿಸಕೊಳ್ಳಲಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಪಾವತಿ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ದಾಖಲಾದ ಪ್ರಕರಣಗಳಿಗೆ ಹೆಚ್ಚುವರಿ ಪರಿಹಾರ ವಿತರಿಸಲಾಗುತ್ತಿದ್ದು, ಇದೂವರೆಗೆ ಒಟ್ಟು 647.58 ಕೋಟಿ ಪರಿಹಾರ ಡಿಫೆನ್ಸ್ ಎಸ್ಟೇಟ್ ಆಫೀಸರ್ ಬೆಂಗಳೂರು ಅವರಿಂದ ಬಿಡುಗಡೆ ಆಗಿದೆ ಎಂದರು.
ಜಿಲ್ಲೆಯ ಸಂತ್ರಸ್ಥರಿಗೆ ಪರಿಹಾರದ ಮೊತ್ತವನ್ನು ಒದಗಿಸುವ ಕಾರ್ಯಗಳನ್ನು ಜಿಲ್ಲಾಡಳಿತ ಆದ್ಯತೆಯಲ್ಲಿ ಮಾಡುತ್ತಿದ್ದು, ಸಂತ್ರಸ್ಥರು ಸೂಕ್ತ ದಾಖಲೆಗಳನ್ನು ತ್ವರಿತವಾಗಿ ನೀಡಿದಲ್ಲಿ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿ ವಿತರಿಸಲು ಸಾಧ್ಯವಾಗಲಿದೆ. ಪರಿಹಾರ ಪಡೆಯುವಲ್ಲಿ ವಿವಾದಗಳಿದ್ದಲ್ಲಿ ಸದ್ರಿ ಪ್ರಕರಣದ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಲಾಗುತ್ತಿದೆ ಎಂದ ಅವರು, ಕೊಂಕಣ ರೈಲ್ವೆ ಸಂತ್ರಸ್ಥರ ಭೂ ಸ್ವಾಧೀನ ಕುರಿತ ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲಿ ಪರಿಹಾರದ ಮೊತ್ತವನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿ.ಪಂ. ಸಿಇಒ ಡಾ. ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಝೂಪಿಶಾನ್ ಹಕ್ ಇದ್ದರು.



