
ಮಂಗಳೂರು: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಆಮಿಷ ತೋರಿಸಿ ನೇಪಾಳದಿಂದಲೇ ವಂಚಿಸುತ್ತಿದ್ದ ಉತ್ತರ ಭಾರತ ಮೂಲದ 11 ಮಂದಿ ವಂಚಕರನ್ನು ಮಂಗಳೂರು ಸೆನ್ ಕೈಂ ಪೊಲೀಸರು ಬಂಧನ ಮಾಡಿದ್ದು, ಲ್ಯಾಪ್ಟಾಪ್ ಸೇರಿದಂತೆ 21 ಮೊಬೈಲ್ ಗಳು ಹಾಗೂ ವಿವಿಧ ಕಂಪನಿಯ 20 ಸಿಮ್ಕಾರ್ಡ್ಗಳು, ಬೇರೆ ಬೇರೆ ಬ್ಯಾಂಕ್ಗಳ 20 ಡೆಬಿಟ್-ಕ್ರೆಡಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರನ್ನು ಗುಜರಾತ್ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ ಪುಪ್ಲ ಶಿವಕುಮಾರ್ ರಾವ್ (32), ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು ಹರ್ಷ ಮಿಸ್ರಾ (22) ಹಾಗೂ ಮುಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರ್ನ ರಾಜೀವ್ ರಂಜನ್ ಕುಮಾರ್ (30), ರಾಜಸ್ತಾನದ ಓಂ ಪ್ರಕಾಶ್ ಯಾದವ್ (37) ಎಂದು ತಿಳಿಸಿದರು.
ಈ ವಂಚಕ ತಂಡದಲ್ಲಿ ಒಟ್ಟು 16 ಮಂದಿ ಭಾರತೀಯರು ಹಾಗೂ ಚೀನಾದ ಪ್ರಜೆಗಳು ಸೇರಿದ್ದು, ಚೀನಾದ ಆರೋಪಿತರನ್ನು ನೇಪಾಳ ಪೊಲೀಸರು ಬಂಧನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿ ಆಗಿರುವ ಇನ್ನೂ 5 ಮಂದಿ ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.
ಬಂಧಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ಗಳನ್ನು ಪರಿಶೀಲಿಸಿದಾಗ, ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಿವೆ. ಈ ಖಾತೆಗಳ ವಿರುದ್ಧ ಎನ್ ಸಿಆರ್ ಪಿ ಪೂರ್ಟ್ ಲ್ ನಲ್ಲಿ ನಲ್ಲಿ 4,580ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಒಂದೇ ಬ್ಯಾಂಕ್ ಖಾತೆಯಲ್ಲೇ 167 ಕೋಟಿ ಹಣ ವರ್ಗಾವಣೆ ಆಗಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾತ್ರ 10 ಖಾತೆಗಳ ಮೂಲಕ 30.70 ಕೋಟಿ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದರು.
ಉಳಿದ ಖಾತೆಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದೆ. ಮಂಗಳೂರು ಸೆನ್ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಂದ 1.38 ಕೋಟಿ ಹಣವನ್ನು 10 ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪ ಈ ತಂಡದ ಮೇಲೆ ಇದೆ. ನೇಪಾಳದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲವನ್ನು ತಾಂತ್ರಿಕ ವಿಶ್ಲೇಷಣೆ ಮೂಲಕ ಪತ್ತೆ ಹಚ್ಚಲಾಗಿದೆ ಎಂದರು.

ಅಂತರ ರಾಷ್ಟ್ರೀಯ ಮಟ್ಟದ ವಂಚಕರು ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಮೊದಲ ತಂಡವು ನೇಪಾಳದಿಂದ ಕಾರ್ಯಾಚರಣೆ ಮಾಡುತ್ತಿತ್ತು. ಸಾಮಾಜಿಕ ಜಾಲತಾಣದ ಮೂಲಕ ಏಜೆಂಟ್ ಹಾಗೂ ಖಾತೆದಾರರನ್ನು ನೇಮಕ ಮಾಡಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಹಾಗೂ ಯುಎಸ್ ಡಿಟಿ ರೂಪದಲ್ಲಿ ಪರಿವರ್ತಿಸಿ ವಿದೇಶಕ್ಕೆ ಕಳುಹಿಸುತ್ತಿತ್ತು. ಎರಡನೇ ತಂಡವು ಕಾಂಬೋಡಿಯಾ, ದುಬೈ ಮುಂತಾದ ದೇಶಗಳಿಂದ ಹೂಡಿಕೆದಾರರನ್ನು ಸಂಪರ್ಕ ಮಾಡಿ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮೋಸ, ಹೆಚ್ಚಿನ ಲಾಭದ ಆಮಿಷ ನೀಡಿ ಹಣ ಸಂಗ್ರಹ. ಈ ಎರಡೂ ತಂಡಗಳ ಹಣದ ವ್ಯವಹಾರವನ್ನು ನೇಪಾಳದಲ್ಲಿರುವ ಮುಖ್ಯ ತಂಡ ನಿಯಂತ್ರಿಸುತ್ತಿತ್ತು ಎಂದರು.
ವಂಚಕರು ಇನ್ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ನಕಲಿ ಜಾಹೀರಾತು ನೀಡಿ ವಿವಿಧ ಹುದ್ದೆಗಳಿಗೆ ಆಹ್ವಾನಿಸುತ್ತಿದ್ದರು. ಶೇ 5 ರಿಂದ ಶೇ 10 ಕಮಿಷನ್, ವಿದೇಶ ಪ್ರವಾಸ, ವಸತಿ ಸೌಲಭ್ಯ ನೀಡುವ ಆಮಿಷವೊಡ್ಡಿ ಯುವಕರನ್ನು ದುಬೈ, ನೇಪಾಳಕ್ಕೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರ ಸಿಮ್ ಹಾಗೂ ಬ್ಯಾಂಕ್ ಖಾತೆಗಳನ್ನು ಬಳಸಿ ವಂಚನೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ವಾಟ್ಸ ಆ್ಯಪ್, ಟೆಲಿಗ್ರಾಂ ಮೂಲಕ ಸಂಪರ್ಕ ಮಾಡಿ ನಕಲಿ ಅಪ್ಲಿಕೇಷನ್ ಮೂಲಕ ಲಾಭ ತೋರಿಸಿ ಪ್ರಾರಂಭದಲ್ಲಿ ಸ್ವಲ್ಪ ಹಣ ವಾಪಸ್ ನೀಡಿ ನಂಬಿಕೆ ಗಿಟ್ಟಿಸಿ ನಂತರ ಹೆಚ್ಚಿನ ಹೂಡಿಕೆಗೆ ಒತ್ತಾಯದ ಮೂಲಕ ಪ್ರತಿದಿನ 60 ಲಕ್ಷದಿಂದ 1 ಕೋಟಿ ವರೆಗೆ ವಂಚನೆ ನಡೆಯುತ್ತಿತ್ತು ಎಂದು ಮಾಹಿತಿ ನೀಡಿದರು.
ಡಿಜಿಟಲ್ ಸ್ಲೇವರಿ ಕುರಿತ ಎಚ್ಚರಿಕೆ ವಹಿಸಿ: ಕಮಿಷನರ್
ವಿದೇಶ ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಮೋಸ ಮಾಡಿ , ಪಾಸ್ಪೋರ್ಟ್ ಕಬಳಿಸಿ, ಸೈಬರ್ ವಂಚನೆಗೆ ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 6 ಮಂದಿಯನ್ನು ಈ ರೀತಿಯ ಸೈಬರ್ ಸ್ಲೇವರಿಯಿಂದ ರಕ್ಷಿಸಲಾಗಿದೆ. ಹಣವನ್ನು ತಕ್ಷಣವೇ ಯುಎಸ್ ಡಿಟಿ ಪರಿವರ್ತನೆ, ವಿದೇಶಕ್ಕೆ ಕಳುಹಿಸುವುದು, ದೂರು ನೀಡಲು ವಿಳಂಬ ಇವೇ ಪ್ರಮುಖ ಕಾರಣಗಳಾಗಿವೆ. ಗಂಟೆಯೊಳಗೆ 1930ಗೆ ಕರೆ, ತಕ್ಷಣ ಪೊಲೀಸ್ ದೂರು ನೀಡಿ. ನಕಲಿ ಲೋನ್, ಜಾಬ್, ಗೇಮ್ ಅಪ್ಗಳಿಂದ ದೂರ, ಒಟಿಪಿ ಷೇರ್ ಮಾಡಬೇಡಿ, ನಕಲಿ ಅಧಿಕಾರಿಗಳ ವಿಡಿಯೊ ಕಾಲ್ಗೆ ಮರುಳಾಗಬೇಡಿ, ಗೂಗಲ್ ಕಸ್ಟಮರ್ ಕೇರ್ ನಂಬಬೇಡಿ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.


