ಮಂಗಳೂರು: ಗಾಂಜಾ ಸೇವನೆ ಹಾಗೂ ಗಾಂಜಾ ಮಾರಾಟ ಧಂದೆಗೆ ಸಂಬಂಧಿಸಿದಂತೆ ವೈದ್ಯರು ಮತ್ತು ವೈದ್ಯಕೀಯ, ದಂತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರ ಗುತ್ತಿಗೆ ನೇಮಕಾತಿ ರದ್ದುಪಡಿಸಿ ಏಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಆಂತರಿಕ ಶಿಸ್ತು ಸಮಿತಿ ವರದಿ ಆಧಾರದ ಮೇಲೆ ಕೆಎಂಸಿ ಡೀನ್ ಡಾ.ಉನ್ನಿಕೃಷ್ಣನ್ ಅವರು ಜನರಲ್ ಮೆಡಿಸಿನ್ ವಿಭಾಗದಲ್ಲಿ ಪ್ರೊಬೇಷನರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಸಮೀರ್, ಹಾಗೂ ಡಾ.ಬಾಲಾಜಿ ನೇಮಕವನ್ನು ರದ್ದುಗೊಳಿಸಿದ್ದಾರೆ. ಜತೆಗೆ ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದ ಏಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಬಂಧನದ ನಂತರ, ಕಾಲೇಜು ಎಲ್ಲಾ ಹಾಸ್ಟೆಲ್ಗಳಲ್ಲಿ ತಪಾಸಣೆ ಮಾಡಲಾಗಿದೆ. ಕೆಲಸದ ಸ್ಥಳವನ್ನು ಕಾಲೇಜು ಅಧಿಕಾರಿಗಳು ಪರಿಶೀಲಿಸಲಿದ್ದು, ವೈದ್ಯಕೀಯ ಕಾಲೇಜಿನ ದಿಟ್ಟ ಕ್ರಮವನ್ನು ಸ್ವಾಗಿತಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸರು ನಡೆಸುತ್ತಿರುವ ತನಿಖೆಗೆ ವೈದ್ಯಕೀಯ ಕಾಲೇಜು ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ. ಕಾಲೇಜಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾದಕ ದ್ರವ್ಯ ಸೇವನೆಯ ಕುರಿತು ಜಾಗೃತಿ ಮೂಡಿಸಲು ಮತ್ತು ಕಾರ್ಯಾಗಾರಗಳನ್ನು ನಡೆಸಲು ಪೊಲೀಸರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.
ಗಾಂಜಾ ಸೇವನೆ ಮತ್ತು ಮಾದಕ ಸೇವನೆ ವಿರುದ್ಧದ ಹೋರಾಟ ನಿರಂತರ ಪ್ರಕ್ರಿಯೆಯಾಗಲಿದೆ. ನಡೆಯುತ್ತಿರುವ ತನಿಖೆಯ ಭಾಗವಾಗಿ, ಪೊಲೀಸರು ಶುಕ್ರವಾರ ಇನ್ನೂ ಕೆಲವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಹಲವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಗಾಂಜಾ ಮಾರಾಟ ಹಾಗೂ ಸೇವನೆ ಧಂದೆಯಲ್ಲಿ ತೊಡಗಿರುವುದು ಕಂಡುಬಂದರೆ ಬಂಧಿಸಲಾಗುವುದು. ಸುಲಭವಾಗಿ ಹಣ ಗಳಿಸುವುದು ಪೆಡ್ಲರ್ಗಳ ಏಕೈಕ ಉದ್ದೇಶ ಎಂದು ತಿಳಿಸಿದರು.
ಜ.7 ರಂದು ಗಾಂಜಾ ಮಾರಾಟ ಹಾಗೂ ಸೇವನೆ ಹಿನ್ನಲೆಯಲ್ಲಿ ನೀಲ್ ಕಿಶೋರಿಲಾಲ್ ರಾಮ್ಜಿ ಶಾ (38) ಎಂಬಾತನನ್ನು ಪೊಲೀಸರು ಬಂಧಿಸಲಾಗಿತ್ತು. ಆತನ ವಿಚಾರಣೆ ಬಳಿಕ 14 ಮಂದಿ ಬಂಧಿಸಲಾಗಿತ್ತು. ನೀಲ್ ಕಿಶೋರಿಲಾಲ್ ರಾಮ್ಜಿ ಶಾ ವೀಸಾ ರದ್ದುಗೊಳಿಸುವಂತೆ ಪತ್ರ ಬರೆಯಲಾಗುತ್ತದೆ ಕಮಿಷನರ್ ತಿಳಿಸಿದರು.