ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಪ್ರಕರಣದಲ್ಲಿ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಅವರ ಮೃತ ದೇಹವು ಫಲ್ಗುಣಿ ನದಿಯ ಪತ್ತೆ ಆಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೂಳೂರು ಸೇತುವೆಯಿಂದ ಮಾಜಿ ಶಾಸಕರ ಸಹೋದರ ಮುಮ್ತಾಜ್ ಅಲಿ ಅವರು ನದಿಗೆ ಹಾರಿದ್ದ ಅನುಮಾನದ ಮೇಲೆ ಎನ್ಡಿಅರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ ಸೇರಿದಂತೆ 6 ತಂಡಗಳು ಪತ್ತೆ ಕಾರ್ಯ ನಡೆಸಿದ್ದರು. ಭಾನುವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ, ಮೃತದೇಹ ಪತ್ತೆ ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ 10.15 ಗಂಟೆಗೆ ವೇಳೆಗೆ ಅವರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿಸಿದರು.
ಮುಮ್ತಾಜ್ ಅಲಿ ನಾಪತ್ತೆ ಆಗಿದ್ದರಿಂದ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಕುಟುಂಬಸ್ಥರು ಕಾವೂರು ಠಾಣೆಗೆ ಬ್ಲಾಕ್ ಮೇಲ್ ಬಗ್ಗೆ ದೂರು ನೀಡಿದ್ದರು. ಹನಿ ಟ್ರ್ಯಾಪ್ ನಡೆದೀದೆ ಎಂಬ ಶಂಕೆಯ ಮೇಲೆ ಆರು ಜನರ ವಿರುದ್ದ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.
ಮುಮ್ತಾಜ್ ಅಲಿ ಅವರು 50 ಲಕ್ಷ ಹಣ ಕೊಟ್ಟಿದ್ದರು, 25 ಲಕ್ಷ ರೂಪಾಯಿಯನ್ನು ಚೆಕ್ ಮೂಲಕ ಸಂದಾಯ ಮಾಡಿದ್ದರು. ಧ್ವನಿ ರೆಕಾರ್ಡಿಂಗ್ ಮಾಡಿ ಮುದ್ರಿಕೆಯನ್ನು ಮುಮ್ತಾಜ್ ಅಲಿ ಅವರು ಅವರ ಕುಟುಂಬದ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ, ಇದರ ಜತೆಗೆ ಅವರು ಕೆಲವರ ಹೆಸರು ಕೂಡ ಉಲ್ಲೇಖಿಸಿದ್ದಾರೆ. ಆರೋಪಿ ಸತ್ತಾರ್ ಎಂಬುವವರ ಹೆಸರನ್ನು ಧ್ವನಿ ಮುದ್ರಿಕೆಯ ರೆಕಾರ್ಡಿಂಗ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಹನಿಟ್ರ್ಯಾಪ್ ಆಗಿರುವ ಶಂಕೆ ಇದ್ದು, ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದರು.
ಎಸಿಪಿ ಮನೋಜ್ ಕುಮಾರ್, ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಇದ್ದರು.