ಮಂಗಳೂರು: ದೇಶದಲ್ಲಿ ಭ್ರಷ್ಟಾಚಾರ ಇದೇ ರೀತಿ ಮುಂದುವರಿಯುತ್ತಾ ಹೋದರೆ ದೇಶದಲ್ಲಿ ಮುಂದೊಂದು ದಿನ ಕ್ರಾಂತಿ ಆಗುವುದು ಖಚಿತ. ಒಂದು ವೇಳೆ ಕ್ರಾಂತಿ ಉಂಟಾದಲ್ಲಿ ದೇಶ ಒಂದು ದೇಶವಾಗಿ ಉಳಿಯಲ್ಲ. ನಾವು ತಪ್ಪು ಮಾಡಿದವರನ್ನು ಸ್ವಾಗತಿಸುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ ಎಂದು ನಿವೃತ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದರು.
ಮಂಗಳೂರು ವಿವಿ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 45 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಸ್ಥಪನಾ ಭಾಷಣ ಮಾಡಿದರು.
ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಪ್ರಾಮಾಣಿಕರಿಗೆ ಇಲ್ಲಿ ಬೆಲೆಯೇ ಇಲ್ಲ. ಇಂದು ತಪ್ಪು ಮಾಡಿದವರನ್ನೂ ಸ್ವಾಗತಿಸುವ ಕಾಲ ಬಂದಿದೆ. ಸಮಾಜವನ್ನು ಬದಲಾಯಿಸಿದಿದ್ದರೆ ಸಮಾಜಕ್ಕೆ ಆಪತ್ತು ಖಂಡಿತಾ ಇದೆ ಎಂದು ಹೇಳಿದರು.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಲ್ .ಧರ್ಮ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿ ನಮ್ಮದು. ಭವಿಷ್ಯದ ಜನಾಂಗವನ್ನು ಸೃಷ್ಟಿಸುವ ಜವಾಬ್ದಾರಿ ಜತೆಗೆ ವಿವಿ ಗುಣಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಲಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಎ. ಎಂ. ಖಾನ್ ವಂದಿಸಿದರು. ವಿದ್ಯಾರ್ಥಿನಿ ಶ್ರೀದೇವಿ ನಿರೂಪಿಸಿದರು.