ಬೆಂಗಳೂರು: ಸಾಕಷ್ಟು ಭಾರಿ ಮುಂದೂಡಿದ್ದ ಪರೀಕ್ಷಾರ್ಥಿಗಳಲ್ಲಿ ಆತಂಕಕ್ಕೆ ಕಾರಣ ಆಗಿದ್ದ ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನ ನಿಗದಿ ಮಾಡಲಾಗಿದ್ದು, ಕೆಎಎಸ್ ಆಕಾಂಕ್ಷಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಇದೇ 27 ರಂದು ನಿಗದಿ ಆಗಿದ್ದು, ಸುಮಾರು 2,10,910 ಮಂದಿ ಪರೀಕ್ಷೆ ಎದುರಿಸಲಿದ್ದಾರೆ. 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನಡೆಯಬೇಕಿದೆ. ಈ ಮೊದಲು ಅ. 25 ರಂದು ಭಾನುವಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಆ ದಿನ ಐಪಿಬಿಎಸ್ ಪರೀಕ್ಷೆಗಳು ಇರುವ ಕಾರಣ ಪರೀಕ್ಷಾ ದಿನ ಬದಲಾವಣೆ ಮಾಡಲಾಗಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಅ 27 ರಂದು ಬದಲಾವಣೆ ಮಾಡಲಾಗಿದೆ. ಈಗ ಬದಲಾವಣೆ ಮಾಡಿರುವ ದಿನ ಕೂಡ ಕೆಎಎಸ್ ಆಕಾಂಕ್ಷಿಗಳು ಸಮಸ್ಯೆ ಎದುರಾಗಿದ್ದು ರಜಾ ದಿನ ಬಿಟ್ಟು ಕೆಲಸದ ಅವಧಿಯಲ್ಲಿಯೇ ಪರೀಕ್ಷಾ ನಡೆಸುತ್ತಿರುವ ಆಯೋಗದ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಜಾ ದಿನಗಳಲ್ಲಿ ಮಾಡಲಾಗುತ್ತದೆ, ಆದರೆ ಈ ಬಾರಿ ಭಾನುವಾರದ ಬದಲಾಗಿ ಮಂಗಳವಾರ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಈ ದಿನಾಂಕ ಬದಲಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಪರೀಕ್ಷೆಗೆ ಇನ್ನೂ ಎರಡೂ ದಿನ ಬಾಕಿ ಉಳಿದಿದ್ದು, ಮತ್ತೆ ಪರೀಕ್ಷೆ ದಿನಾಂಕ ಬದಲಾವಣೆ ಕುರಿತು ಕೆಪಿಎಸ್ಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆಯೋಗ 2017, 18 ರ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಗೆ ಅವಕಾಶವಿಲ್ಲ. ಹಲವು ವರ್ಷಗಳಿಂದ ಕನಸು ಕಟ್ಟಿಕೊಂಡು ಓದುತ್ತಾ ಇರೋ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ.
ಮಂಗಳವಾರ ಖಾಸಗಿ ಎಂಎನ್ಸಿ ಕಂಪನಿಗಳಿಗೆ ರಜೆ ಇಲ್ಲ. ಇದಲ್ಲದೇ ವಾರದ ದಿನದಲ್ಲಿ ಪರೀಕ್ಷೆ ನಡೆಸುತ್ತಿರೋದರಿಂದ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರೈಟರ್ ಸಿಗೋದಿಲ್ಲ. ಪರೀಕ್ಷಾ ಸೆಂಟರ್ ಗಳಲ್ಲಿ ನೂರೊಂದು ಸಮಸ್ಯೆ ಇದೆ. ಬೆಂಗಳೂರಿನ ಅಭ್ಯರ್ಥಿಗಳಿಗೆ ಚಿತ್ರದುರ್ಗ, ಬೆಳಗಾವಿ ಅಭ್ಯರ್ಥಿಗಳಿಗೆ ಮೈಸೂರು ಪರೀಕ್ಷೆ ಕೇಂದ್ರ ಮಾಡಲಾಗಿದೆ. ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
ಮಂಗಳವಾರವೇ ನೇಟ್ ಪರೀಕ್ಷೆ ಇರುವುದರಿಂದ ಅದೇ ದಿನ ಪ್ರಿಲೀಮ್ಸ್ ಪರೀಕ್ಷೆ ಇದ್ದು, ಎರಡೆರಡು ಪರೀಕ್ಷೆ ಬರೆಯೋದು ಹೇಗೆ ಎಂಬ ಆತಂಕ ಪರೀಕ್ಷಾರ್ಥಿಗಳದ್ದು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಎಸ್ ಸಿ ಈ ತರಾತುರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೆಪಿಎಸ್ಸಿ ಮಾತ್ರ ಪರೀಕ್ಷೆ ನಡೆಸಲು ಮೊಂಡ ಹಠ ಮಾಡುತ್ತಿದೆ. ಕೂಡಲೇ ಪರೀಕ್ಷೆ ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.