ಮಂಗಳೂರು: ಬಿಗ್ಬಾಸ್ ಕನ್ನಡ 9 ನೇ ಆವೃತ್ತಿ ವಿಜೇತ ರೂಪೇಶ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ರೂಪೇಶ್ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಕಲೆ ಹಾಗೂ ಕಲಾವಿದರ ಮೇಲೆ ತುಂಬಾ ಕಾಳಜಿ, ಪ್ರೀತಿ ಇದೆ. ಮಂಗಳೂರು ಪೊಲೀಸರು ಕಲಾವಿದರಿಗೆ ನೀಡುವ ಗೌರವ ನನಗೆ ತುಂಬಾ ಖುಷಿ ನೀಡಿದೆ. ಪೊಲೀಸ್ ಇಲಾಖೆಯ ಮೇಲೆ ಅಪಾರ ಗೌರವ ಹೊಂದಿದ್ದೇನೆ. ಒತ್ತಡದಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಹಗಲು-ರಾತ್ರಿ ಜನರ ಸುರಕ್ಷತೆ ಕಾಪಾಡುವ ಪೊಲೀಸರು ನಮ್ಮೆಲ್ಲರ ನಿಜವಾದ ಹಿರೋಗಳು ಹಾಗೂ ವಿನ್ನರ್ ಗಳು . ಪೊಲೀಸ್ ಕಮಿಷನರ್ ಅವರು ನೀಡಿರುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ ಎಂದು ಹೇಳಿದರು.
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ರೂಪೇಶ್ ಶೆಟ್ಟಿ ತುಳು, ಕನ್ನಡ ಚಿತ್ರರಂಗದ ಸಾಧನೆಯ ಜತೆಗೆ ಬಿಗ್ಬಾಸ್ನಲ್ಲಿಯೂ ವಿಜೇತರಾಗುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಅವರು ಇನ್ನಷ್ಟು ಸಾಧನೆ ಮಾಡಿ ಕನ್ನಡ ತುಳುಭಾಷೆ ಕಂಪನ್ನು ಪಸರಿಸಲಿ ಎಂದರು.
ರೂಪೇಶ್ ಶೆಟ್ಟಿ ಅವರು ತಾವೇ ರಚಿಸಿದ ‘ಬುದ್ಧಿವಂತರು…ನಾವು ಬುದ್ಧಿವಂತ ದಡ್ಡರು..ಜೀವನವೇ ಒಂದು ಡೊಂಬರಾಟ…’ ಹಾಡನ್ನು ಹಾಡಿದರು.
ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್, ಪರಮೇಶ್ವರ ಭಟ್, ರಾಘವೇಂದ್ರ ಬೈಂದೂರು ಸೇರಿದಂತೆ ಹಲವು ಅಧಿಕಾರಿಗಳುಇದ್ದರು.