ಮಂಗಳೂರು: 64 ವರ್ಷದ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಹೃದಯ ಕಾಯಿಲೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಹೊಸ ಮೈಲುಗಲ್ಲು ಸಾಧಿಸಿದೆ. ಮಹಾಪಧಮನಿ ಮತ್ತು ರಕ್ತನಾಳಗಳ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ಜಿಲ್ಲೆಯ ರೋಗಿಯೊಬ್ಬರಿಗೆ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಯಶಸ್ವಿ ಹೈಬ್ರಿಡ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಯೂಸುಫ್ ಕುಂಬ್ಳೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆ ಇದಾಗಿದ್ದು, ರೋಗಿಯನ್ನು ಈ ಮೊದಲು ಬೆಂಗಳೂರಿಗೆ ಕರೆದಯೊಯ್ಯಲಾಗಿತ್ತು. ಇದು ಅಪರೂಪದ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ಅಲ್ಲಿನ ವೈದ್ಯರು ಚಿಕಿತ್ಸೆಗೆ ಹಿಂದೇಟು ಹಾಕಿದ್ದರು. ಅಲ್ಲಿಂದ ರೋಗಿಯನ್ನು ಮಂಗಳೂರಿಗೆ ಕರೆತರಲಾಗಿತ್ತು. ನಾವು ಕೂಡ ಯಾವುದೇ ಭರವಸೆಯನ್ನು ನೀಡಿರಲಿಲ್ಲ. ಆದರೆ ರೋಗಿಯ ಸಂಬಂಧಿಗಳು ಧೈರ್ಯ ನೀಡಿದ್ದರಿಂದ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.
ರೋಗಿಗೆ ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಮಹಾಪಧಮನಿಯ ದೊಡ್ಡ ರಕ್ತನಾಳ ಉಬ್ಬಿದ ಪರಿಣಾಮ ಹೊಟ್ಟೆ, ಮೂತ್ರಪಿಂಡ ಹಾಗೂ ಕಾಲುಗಳ ರಕ್ತ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಇದೊಂದು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಕೂಡ ಹೌದು. ಶಸ್ತ್ರಚಿಕಿತ್ಸೆ ವೇಳೆ ಒಂದಿಷ್ಟು ಏರುಪೇರುಗಳಾದರೂ ಮಹಾಪಧಮನಿ ಒಡೆದು, ರೋಗಿ ಸಾಯುವ ಸಾಧ್ಯತೆಯೇ ಹೆಚ್ಚು. ಆದರೆ ನಮ್ಮ ವೈದ್ಯರ ತಂಡವು ಇದನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದರು.
ಹೈಬ್ರಿಡ್ ವೈದ್ಯಕೀಯ ಚಿಕಿತ್ಸಾ ವಿಧಾನವನ್ನು ಅನುಸರಿಸಿ ರಕ್ತನಾಳಗಳಿಗೆ ತೆರೆದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಹಾಪಧಮನಿ ಮತ್ತು ಕಿಬ್ಬೊಟ್ಟೆಯ ರಕ್ತನಾಳಗಳಿಗೆ ಎರಡು ಸ್ಟೆಂಟ್ ಅಳವಡಿಸಲಾಗಿದೆ. ಈ ಯಶಸ್ವಿ ಶಸ್ತ್ರ ಚಿಕಿತ್ಸಾ ತಂಡದಲ್ಲಿ ನಾನೂ ಸೇರಿದಂತೆ ಡಾ. ಪ್ರಶಾಂತ್ ವೈದ್ಯನಾಥ್, ಡಾ. ಶ್ಯಾಂ ಅಶೋಕ್, ಡಾ.ಆದಿತ್ಯ ಭಾರಧ್ವಾಜ್, ಡಾ.ಸುಖೇನ್, ಎನ್.ಶೆಟ್ಟಿ, ಡಾ.ಪ್ರದೀಪ್ ಕೆ.ಜೆ, ಡಾ.ಸಂಧ್ಯಾರಾಣಿ ಮತ್ತು ಡಾ. ಸಯ್ಯದ್ ಮಹಮ್ಮದ್ ಮತ್ತು ಡಾ. ಲತಾ ಇದ್ದರು. ರೋಗಿ ಈಗ ಆರೋಗ್ಯದಿಂದ ಇದ್ದಾರೆ. ಶೀಘ್ರವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇಂಡಿಯಾನ ಆಸ್ಪತ್ರೆಯ ಅಧ್ಯಕ್ಷ ಡಾ.ಅಲಿ ಕುಂಬ್ಳೆ, ವೈದ್ಯಕೀಯ ನಿರ್ದೇಶಕ ಡಾ.ಅಪೂರ್ವ್, ಡಾ. ಶ್ಯಾಮ್ ಅಶೋಕ್, ಡಾ.ಸಂಧ್ಯಾರಾಣಿ ಹಾಗೂ ಡಾ.ಲತಾ ಇದ್ದರು.