ಸಿರಸಿ: ನಾನು ಕಾಲ್ಪನಿಕ ಕತೆಗಳನ್ನು ಬರೆಯುವುದಿಲ್ಲ. ನನ್ನ ಹೆಚ್ಚಿನ ಕತೆಗಳು ಸಾಮಾಜಿಕ ಅಸಮಾನತೆ, ಶೋಷಣೆ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿವೆ. ನಾಗರಿಕ ಸಮಾಜದಲ್ಲಿ ಇಂದಿಗೂ ಅಸ್ಪ್ರಶ್ಯತೆ ಪಿಡುಗು ಇರುವುದು ಶೋಚನೀಯ ಎಂದು ಕಥೆಗಾರ, ಗೋವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಕಾಶ್ ಪರ್ಯೆಂಕರ್ ಹೇಳಿದರು.
ಸಾಹಿತ್ಯ ಅಕಾಡೆಮಿ, ನವದೆಹಲಿ ಸಿರಸಿ ನರೇಬೈಲ್ನಲ್ಲಿ ಚಂದನ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಕಥಾಸಂಧಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಅಸ್ಪ್ರಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಕಥಾ ಹಂದರವನ್ನು ಒಳಗೊಂಡ ಕಾಜ್ರೊ ಕತೆಯನ್ನು ಡಾ. ಪ್ರಕಾಶ್ ಪರ್ಯೆಂಕರ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದರು. ಕಾಜ್ರೊ ಕತೆಯನ್ನು ಆಧರಿಸಿ ತಯಾರಿಸಲಾದ ಕೊಂಕಣಿ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬಗ್ಗೆ ಈ ಸಂದರ್ಭದಲ್ಲಿ ಕಥೆಗಾರರು ಸ್ಮರಿಸಿದರು.
ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಕಥೆಗಾರ ಡಾ. ಪ್ರಕಾಶ್ ಪರ್ಯೆಂಕರ್ ಅವರನ್ನು ಪರಿಚಯಿಸಿ, ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಲ್ನಾಡ್ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಘದ ಸ್ಥಾಪಕ ಲಕ್ಷ್ಮೀ ನಾರಾಯಣ ಹೆಗಡೆ, ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಮಂಡಳಿ ಸದಸ್ಯರಾದ ಎಚ್. ಎಂ. ಪೆರ್ನಾಲ್, ಶ್ರೀವಿದ್ಯಾ ಕಾಮತ್ ಮತ್ತು ಸ್ಟ್ಯಾನಿ, ಬೇಳ ಇದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಾರ್ಥನ ಮತ್ತು ಮೇಘನಾ – ಪ್ರಾರ್ಥನಾ ಗಿತೆ ಹಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀವಿದ್ಯಾ ಕಾಮತ್ ನಿರೂಪಿಸಿದರು. ವಿಜಯೇಂದ್ರ ಲಾಡ್ ವಂದಿಸಿದರು.