ಮಂಗಳೂರು: ಸರಕು ಸಾಗಣೆ ವಾಹನದಲ್ಲಿ ದಾಖಲೆ ಪತ್ರಗಳಿಲ್ಲದೇ ಸಾಗಿಸುತ್ತಿದ್ದ 20 ಚೀಲ ಅಕ್ಕಿ ಹಾಗೂ ಗೋದಾಮಿನಲ್ಲಿ ಸಂಗ್ರಹಿಸಿದ್ದ 180 ಚೀಲ ಅಕ್ಕಿ ಸೇರಿದಂತೆ ಒಟ್ಟು 10 ಟನ್ ಅಕ್ಕಿಯನ್ನು ಪೊಲೀಸರು ಮಂಗಳವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲ್ಲೂಕು ವಿಟ್ಲ ಕಸಬಾ ಗ್ರಾಮದ ಕುದ್ದುಪದವು, ಮರಕ್ಕಿಣಿ ಪ್ರದೇಶದಲ್ಲಿ ಪಿಎಸ್ಐ ಸಂದೀಪ್ ಕುಮಾರ್ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಸರಕು ಸಾಗಣೆ ವಾಹನವೊಂದರಲ್ಲಿ ಅಕ್ಕಿ ಸಾಗಿಸುತ್ತಿದ್ದುದು ಕಂಡುಬಂದಿತ್ತು. ಕೇಪು ಗ್ರಾಮದ ಮರಕ್ಕಿಣಿಯಲ್ಲಿರುವ ಹನೀಫ್ ಅವರ ಗೋದಾಮಿಗೆ ಅಕ್ಕಿಯನ್ನು ಸಾಗಿಸುತ್ತಿರುವುದಾಗಿ ಚಾಲಕ ಮಹಮ್ಮದ್ ಆಲಿ ತಿಳಿಸಿದ್ದರು. ಆದರೆ, ಅದಕ್ಕೆ ಪೂರಕ ದಾಖಲೆ ಪತ್ರಗಳನ್ನು ಒದಗಿಸಲಿಲ್ಲ. ಹಾಗಾಗಿ ವಾಹನ ಹಾಗೂ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಹನದಲ್ಲಿ ತಲಾ 50 ಕೆ.ಜಿ. ಅಕ್ಕಿ ಇದ್ದ 20 ಚೀಲಗಳು ಇದ್ದವು. ಮರಕ್ಕಿಣಿಯಲ್ಲಿರುವ ಗೋದಾಮ ಅನ್ನು ಪರಿಶೀಲಿಸಿದಾಗ ಅಲ್ಲೂ ದಾಖಲೆಗಳಿಲ್ಲದ 180 ಚೀಲಗಳಲ್ಲಿ ಒಟ್ಟು 9 ಟನ್ ಅಕ್ಕಿಯನ್ನು ತುಂಬಿಸಿದ್ದು ಪತ್ತೆಯಾಗಿದೆ. ಒಟ್ಟು 200 ಅಕ್ಕಿ ಚೀಲಗಳನ್ಮು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ರೂ 3.30 ಲಕ್ಷ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ವಾಹನದ ಸೇರಿದಂತೆ ಒಟ್ಟು 6.30 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.