ಪಾಸ್ಟಿಕ್, ಪೇಪರ್ ನಲ್ಲಿ ಆಹಾರ ಪಾರ್ಸೆಲ್ ನಿಷೇಧ, ಧಮ್ಮು, ಗುಟ್ಕಾ ಸೇವನೆಗೆ ದಂಡ ಪ್ರಯೋಗಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ ರಾಜು

 

 

ಮಂಗಳೂರು: ಹೊಟೇಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್‍ನಲ್ಲಿ ಇರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣ ಆಗುತ್ತಿದೆ. ಹೋಟೆಲ್, ಕ್ಯಾಂಟೀನ್‍ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಬಿಸಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್ ಳಲ್ಲಿ ಬಿಸಿ ಆಹಾರ ಪದಾರ್ಥಕ್ಕೆ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ತಂಬಾಕು ಸೇವನೆ ನಿಷೇಧ, ಎಚ್ಚರಿಕೆ ಫಲಕ ಇಲ್ಲದೆ ಇರುವುದು, ಅಂಗಡಿ, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರ್ ಲೈಟರ್, ಬೆಂಕಿ ಪೊಟ್ಟಣಗಳನ್ನು ಇಟ್ಟರೆ ಅವರಿಗೆ ದಂಡ ವಿಧಿಸಬೇಕು. ತಂಬಾಕು ಬ್ರ್ಯಾಂಡ್ ಹೆಸರಿನ ಜತೆಗೆ ಜಾಹಿರಾತು ಫಲಕಗಳು ಅಥವಾ ಯಾವುದೇ ರೀತಿಯಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, 21 ವರ್ಷದೊಳಗಿನವರಿಗೆ ತಂಬಾಕು ಮಾರಾಟ ಮಾಡಿದರೆ, ಚಿಲ್ಲರೆ ಅಂಗಡಿಗಳಲ್ಲಿ ಸಿಗರೇಟ್, ತಂಬಾಕು ಉತ್ಪನ್ನಗಳ ಪ್ರದರ್ಶನ ಮಾಡಿದರೆ ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಲಾ ಕಾಲೇಜುಗಳ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಮಾಡುವವರ ಬಗ್ಗೆ ಶಾಲಾ-ಕಾಲೇಜುಗಳ ಮುಖ್ಯಸ್ಥರು ನಿಗಾ ವಹಿಸಬೇಕು. ಅಂತಹ ಅಂಗಡಿಗಳ ಪಟ್ಟಿಯನ್ನು ತಮ್ಮ ವ್ಯಾಪಿಯಲ್ಲಿ ಇರುವ ಸ್ಥಳೀಯಾಡಳಿತಕ್ಕೆ ಮತ್ತು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಜಿಲ್ಲೆಯಲ್ಲಿ ತಂಬಾಕು ಮಾರಾಟ ಮತ್ತು ಸೇವನೆಯನ್ನು ನಿಯಂತ್ರಿಸಬಹುದು ಎಂದರು.

ಶಾಲಾ ಕಾಲೇಜುಗಳಲ್ಲಿ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ನಿಷೇಧ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ತಂಬಾಕು ಉತ್ಪನ್ನಗಳನ್ನು ಬಳಸದಂತೆ ಸೂಕ್ತ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ತಂಬಾಕಿಗೆ ಸಂಬಂಧಿಸಿದಂತೆ ಜಾಹೀರಾತು ಫಲಕಗಳು ಕಂಡು ಬಂದಿದ್ದು, ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಂಬಾಕಿನ ಅಪಾಯಕ್ಕೆ ಸಿಲುಕುವ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು ಇರುವ ಸ್ಥಳಕ್ಕೆ ಹೋಗಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ಇದ್ದರು.

ದ.ಕ ಜಿಲ್ಲೆಯಲ್ಲಿ ಒಟ್ಟು 2,587 ಪ್ರಕರಣ ದಾಖಲು
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಗುಟ್ಕಾ ಸೇವನೆ ಮಾಡುವವರಿಗೆ 1000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಅಂಗಡಿಗಳಲ್ಲಿ ಚಿಲ್ಲರೆ ಸಿಗರೇಟ್ ಮಾರಾಟ ಮಾಡಲು ಅವಕಾಶವಿಲ್ಲ. ಇದನ್ನು ಉಲ್ಲಂಘಿಸಿದ ಅಂಗಡಿಗಳಿಗೂ ದಂಡ ವಿಧಿಸಲಾಗುವುದು. ಕೋಟ್ಪಾ ಕಾರ್ಯಾಚರಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,587 ಪ್ರಕರಣ ದಾಖಲಾಗಿದ್ದು, ರೂ 3.89 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ತಂಬಾಕಿಗೆ ಸಂಬಂಧಿಸಿದಂತೆ ಸುಮಾರು 52 ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ತಂಬಾಕು ಉತ್ಪನ್ನ ಪ್ಯಾಕ್‍ನಲ್ಲಿ ಆರೋಗ್ಯ ಎಚ್ಚರಿಕೆಯ ಚಿತ್ರಗಳು ಶೇ 85 ಕ್ಕಿಂತ ಕಡಿಮೆ ಅಳತೆಯಲ್ಲಿ ಇದ್ದರೆ ಮತ್ತು ಹಳೆಯದಾದ ಎಚ್ಚರಿಕೆ ಚಿತ್ರಗಳನ್ನು ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

  1.  

Leave a Reply

Your email address will not be published. Required fields are marked *