
ಬೆಂಗಳೂರು: ಕುಪ್ಮ ಕರ್ನಾಟಕ ನಿಯೋಗವು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಕುಪ್ಮ 2 ವರ್ಷಗಳಿಂದ ಸಲ್ಲಿಸಿರುವ ಮನವಿ ಕುರಿತು ನಡೆದಿರುವ ಪ್ರಗತಿ ಬಗ್ಗೆ ಚರ್ಚೆ ನಡೆಸಿತು.
ಕುಪ್ಮ ನಿಯೋಗಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಪದವಿ ಪೂರ್ವ ಹಂತದಲ್ಲಿ ಆಗಬೇಕಾದ ಅನೇಕ ಬದಲಾವಣೆಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಿದ ಸಚಿವ ಮಧು ಬಂಗಾರಪ್ಪ ಅವರು, ಇಲಾಖೆಯ ನಿರ್ದೇಶಕರು ಸೇರಿದಂತೆ ಎಲ್ಲ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಲು ವರ್ಷದಲ್ಲಿ 2 ಬಾರಿ ಕುಪ್ಮದ ಜತೆ ಸಭೆ ನಡೆಸಲು
ಶಾಲಾ ಶಿಕ್ಷಣ (ಪದವಿಪೂರ್ವ) ನಿರ್ದೇಶಕರಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ 4000 ಕ್ಕೂ ಹೆಚ್ಚು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 63 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಮತ್ತು ಉತ್ತಮ ಫಲಿತಾಂಶ ನೀಡಿ ಶಿಕ್ಷಣ ಇಲಾಖೆಗೆ ಗಣನೀಯ ಕೊಡುಗೆ ನೀಡುವ ಮಹತ್ವಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಈ ರೀತಿಯ ಉತ್ತಮ ಶಿಕ್ಷಣ ನೀಡುವಲ್ಲಿ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಹಲವಾರು ರೀತಿ ಸಮಸ್ಯೆ ಎದುರಿಸುತ್ತಿವೆ ಎಂಬುದರ ಕುರಿತು ಸಚಿವರ ಗಮನಕ್ಕೆ ತರಲಾಯಿತು.
ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಡಿಜಿಲಾಕರ್ ಮೂಲಕ ಮುಂದಿನ ದಿನಗಳಲ್ಲಿ ವಿತರಿಸುವ ಬಗ್ಗೆ ಅದರ ಸಾಧಕ– ಬಾಧಕ ಕುಪ್ಮದ ಜತೆ ಚರ್ಚಿಸಬೇಕು ಎಂದು ಮನವಿ ಮಾಡಲಾಯಿತು. ದ್ವಿತೀಯ ಪಿಯುಸಿ ಉತ್ತೀರ್ಣದ ಅಂಕಪಟ್ಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರ ಸಹಿ ಮತ್ತು ಮೊಹರು ಜತೆಗೆ ಅಂಕಪಟ್ಟಿ ವಿತರಿಸಬೇಕೆಂದು ಮನವಿ ಮಾಡಲಾಯಿತು.
ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಹಾಗೂ ಕನ್ನಡ ಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು 5 ವರ್ಷಗಳಿಗೊಮ್ಮೆ ನವೀಕರಿಸುವ ಕುರಿತಂತೆ ಈ ಹಿಂದೆ ನೀಡಿರುವ ಮನವಿಗೆ ಸರಕಾರ ಸ್ಪಂದನೆ ನೀಡಿದೆ. ತಜ್ಞರ ಶೈಕ್ಷಣಿಕ ಸಮಿತಿ ರಚಿಸುವ ಕುರಿತಂತೆ ಮಾಡಿದ ಮನವಿಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕ ಭರತ್ ಅವರಲ್ಲಿ ಸಭೆ ಕರೆಯುವಂತೆ ಸೂಚಿಸಿದರು ಎಂದು ನಿಯೋಗವು ತಿಳಿಸಿದೆ.


ಶಾಲಾ ಶಿಕ್ಷಣ (ಪದವಿ ಪೂರ್ವ) ನಿರ್ದೇಶಕ ಭರತ್ ಅವರ ಜತೆ ಸಭೆ ನಡೆಸಿದ್ದು, ಕುಪ್ಮ ಸದಸ್ಯರ ಜತೆಗೆ ಮಾರ್ಚ್ ತಿಂಗಳಲ್ಲಿ ಸಭೆ ನಡೆಸಲು ಒಪ್ಪಿಗೆ ಸೂಚಿಸಿದರು. ಈ ಹಿಂದಿನ ಬೇಡಿಕೆಗಳಿಗೆ ಸಂಬಂಧ ಪಟ್ಟಂತೆ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಮತ್ತು ಹಸ್ತಾಂತರದ ಅಧಿಕಾರವನ್ನು ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಹಂತದಲ್ಲಿ ಅನಮೋದಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೊಸ ಖಾಸಗಿ ಅನುದಾನ ರಹಿತ ಕಾಲೇಜನ್ನು ಪ್ರಾರಂಭ ಮಾಡುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಈ ಹಿಂದೆ ಇದ್ದ 46 ಅಂಶಗಳ ಅರ್ಜಿ ನಮೂನೆಯನ್ನು 23 ಅಂಶಗಳಿಗೆ ಸರಳೀಕರಿಸಲಾಗಿದೆ. ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಹೊಸ ಸಂಯೋಜನೆ, ಭಾಷೆ ಮತ್ತು ಹೆಚ್ಚುವರಿ ವಿಭಾಗಗಳ ಅರ್ಜಿಯನ್ನು ಸಂಪೂರ್ಣವಾಗಿ ಆನ್ಲೈನ್ ಪ್ರಕ್ರಿಯೆಗೊಳಿಸಿದ್ದು ಅರ್ಜಿಯಲ್ಲಿ ಈ ಹಿಂದೆ 36 ಅಂಶಗಳ ಅರ್ಜಿ ನಮೂನೆಯನ್ನು 23 ಅಂಶಗಳಿಗೆ ಸರಳೀಕರಿಸಲಾಗಿದೆ. 2024ರ
ನಿಯಮಾವಳಿ ಪ್ರಕಾರ ಹೊಸ ಶಾಶ್ವತ ಅನುದಾನ ರಹಿತ ಕಾಲೇಜುಗಳ ಸ್ಥಳ ಪರಿಶೀಲನೆಯನ್ನು ಒಟ್ಟು ಅರ್ಜಿಗಳಲ್ಲಿ ಶೇ 5 ರಷ್ಟು ಮೂಲಕ ನಡೆಸಲಾಗುತ್ತಿತ್ತು. 5 ವರ್ಷಗಳ ವರೆಗೆ ಹೊಸ ಸಂಯೋಜನೆ/ಭಾಷೆಗೆ ಸಂಬಂಧಿಸಿದ ಅರ್ಜಿಗಳನ್ನು ಶೇ 100 ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಿಂದ ಹೊಸ ಸಂಯೋಜನೆ / ಭಾಷೆ ಅರ್ಜಿಗಳಿಗೂ ಒಟ್ಟು ಶೇ 5 ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪೈಕಿ ಹೊಸ ಸಂಯೋಜನೆ/ ಭಾಷೆ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಈ ಹಿಂದೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಹ್ವಾನಿಸಲಾಗುತ್ತಿತ್ತು. ಇದರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತಿತ್ತು. ಆದ್ದರಿಂದ 2025-26ನೇ ಸಾಲಿಗೆ ಫೆಬ್ರವರಿ ತಿಂಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಳೆದ ಸಾಲಿನಲ್ಲಿ ದಾಖಲಾತಿ ಸಂಖ್ಯೆ 80 ವಿದ್ಯಾರ್ಥಿಗಳನ್ನು ತಲುಪಿದ ನಂತರ ಮಾತ್ರ ಹೊಸ/ಹೆಚ್ಚುವರಿ ವಿಭಾಗಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗುತ್ತಿತ್ತು. ಪ್ರಸ್ತುತ ಸಾಲಿನಿಂದ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ 80 ವಿದ್ಯಾರ್ಥಿಗಳನ್ನು ಪೂರ್ಣಗೊಳಿಸಿರುವ ಕಾಲೇಜುಗಳಿಗೆ, ಹಿಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಆಧಾರದವಾಗಿ ಹೊಸ/ಹೆಚ್ಚುವರಿ ವಿಭಾಗಗಳಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕುಪ್ಮ ಕರ್ನಾಟಕ ಬೇರೆ ಬೇರೆ ಸಂದರ್ಭಗಳಲ್ಲಿ ಮನವಿ ಮಾಡಿರುವುದಕ್ಕೆ ಇಲಾಖೆ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ಇಲಾಖೆಯ ನಿರ್ದೇಶಕ ಭರತ್ ಮತ್ತು ಜಂಟಿ ನಿರ್ದೇಶಕ ಹರ್ಷವರ್ಧನ್ ತಂದರು.
ಈ ನಿಯೋಗದ ನೇತೃತ್ವವನ್ನು ಕುಪ್ಮ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್ ನಾಯಕ್, ರಾಜ್ಯ ಉಪಾಧ್ಯಕ್ಷ ಯುವರಾಜ್ ಜೈನ್, ರಾಜ್ಯ ಕೋಶಾಧಿಕಾರಿ ರಮೇಶ್ ಕೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಕೀರ್ತನ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಡಾ. ದೇವರಾಜ್ ಇದ್ದರು.




