ಧಾರವಾಡ (ನವಲಗುಂದ): ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಆರಂಭಿಸಿರುವ ಕಡಲೆ ಮತ್ತು ಗೋವಿನ ಜೋಳ ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತ ಆಗುವಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ತಹಶೀಲ್ದಾರ್ ಕಚೇರಿಯಿಂದ ಗ್ರಾಮ ಆಡಳಿತ ಅಧಿಕಾರಿ ಖರೀದಿ ಕೇಂದ್ರಗಳಿಗೆ ನೇಮಿಸಿ, ರೈತರ ನೋಂದಣಿ, ಕಾಳು ಖರೀದಿಗೆ ಸಹಾಯ ಮಾಡಬೇಕು. ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆ ಆಗಲು ರೈತರಿಂದ ನೇರ ಖರೀದಿ ವ್ಯವಸ್ಥೆ ಆಗಬೇಕು. ಬೆಳೆ ವಿಮೆ ಪರಿಹಾರ ವಿಳಂಬವಾಗಿ, ರೈತರಿಗೆ ತೊಂದರೆ ಆಗುತ್ತಿದೆ. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ಜರುಗಿಸಿ ಪರಿಶೀಲಿಸಬೇಕು ಎಂದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒತ್ತುವರಿ ಮಾಡಿ, ಮನೆಗಳ ನಿರ್ಮಾಣವಾಗಿರುವ ಕುರಿತು ದೂರುಗಳು ಬಂದಿದ್ದು, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ ಪೂಜಾರ, ರೈತ ಹೋರಾಟಗಾರರಾದ ಸುಭಾಸಚಂದ್ರಗೌಡ ಪಾಟೀಲ, ಯಲ್ಲಪ್ಪ ದಾಡಿಭಾವಿ, ರವಿ ತೋಟದ, ರಘುನಾಥ ನಡುವಿನಮನಿ, ಶಂಕರಪ್ಪ ಅಂಬಲಿ, ಗೋವಿಂದರಡ್ಡಿ ಮೊರಬದ, ಮಲ್ಲಪ್ಪ ಬಸೆಗನ್ನಿ, ಹುಸೇನಸಾಬ ನದಾಫ್, ಶ್ರೀಕಾಂತ ತೋಟದ, ಕರಿಯಪ್ಪ ತಳವಾರ ನಿಂಗಪ್ಪ ಕೆಳಗೇರಿ, ಕೃಷ್ಣ ಮಾದರ, ರಾಘು ಪತ್ತಾರ ಸೇರಿ ನೂರಾರು ಸಾರ್ವಜನಿಕರು, ಅಧಿಕಾರಿಗಳು ಇದ್ದರು.



