ಮಂಗಳೂರು: ದೇಶದ ವಿಕಸಿತ್ ಭಾರತ್ ಸಾಕಾರಕ್ಕೆ ಬ್ಯಾಂಕ್ಗಳ ಪಾತ್ರ ಮಹತ್ವದ್ದಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್ಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನೀತಿ ಸುಧಾರಕ ದೇಬಾಶೀಷ್ ಪಾಂಡೆ ಅವರು ಹೇಳಿದರು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕ್ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ವಿಕಸಿತ್ ಭಾರತ್- 2047, ಹಣಕಾಸು ಸೇವೆಗಳ ಪಾತ್ರದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.
ದೇಶವು ವಿಶ್ವದ 4 ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಆಗಿದೆ, ಈ ದೇಶ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹಿಂದೆ ನಾವು ಊಹಿಸಿರಲಿಲ್ಲ. ಆದರೆ, ಈ ಸಾಧನೆ ಆಗಿದೆ. ನಾವು ವಿಕಸಿತ್ ಭಾರತ್ ಎಂಬ ಮಹಾ ದೃಷ್ಟಿಯತ್ತ ಸಾಗುತ್ತಿದ್ದೇವೆ. ಈ ಪರಿಕಲ್ಪನೆ ಸಾಕಾರ ಮಾಡುವುದು ಸಂಘ ಸಂಸ್ಥೆಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕರು ಸರಕಾರದ ಜತೆಗೆ ಕೈ ಜೋಡಿಸಬೇಕು ಎಂದರು.
ಇದಕ್ಕೆ ದೀರ್ಘಕಾಲಿಕ, ಉನ್ನತ ವೇಗದ ಕಾರ್ಯೋನ್ಮುಖತೆಯೊಂದಿಗೆ ಉತ್ಪಾದಕತೆ, ಬಂಡವಾಳದ ದಕ್ಷತೆ ಮತ್ತು ಕಾರ್ಯಗತ ಸಾಮರ್ಥ್ಯ ಹೆಚ್ಚಳ, ಆರ್ಥಿಕ ಸ್ಥಿರತೆ, ಶಕ್ತಿಶಾಲಿಯಾದ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯ ಬೇಕಾಗುತ್ತದೆ. ಈ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.
ಬ್ಯಾಂಕ್ಗಳು ಗುರಿ ಕೇವಲ ಲಾಭ ಗಳಿಕೆಯಲ್ಲ, ತನ್ನ ಮೂಲ ಧ್ಯೇಯ ಸಾಮಾಜಿಕ ಪರಿವರ್ತನೆ ಕೆಲಸ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಹಣಕಾಸಿನ ವಿವಿಧ ಮಾದರಿಗಳ ಕಾರ್ಯಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.


ಡಿಜಿಟಲ್ ಯುಗದಲ್ಲಿ ಚೆಕ್ಬುಕ್ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವಿಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆ ಆಗಿದೆ, ಕೃತಕ ಬುದ್ಧಿ ಮತ್ತೆ ಬಾಗಿಲು ತಟ್ಟುತ್ತಿದೆ. ಇಂತಹ ತಂತ್ರಜ್ಞಾನ ಹೇಗೆ ಬಳಕೆ ಮಾಡಬೇಕು ಎಂಬುದು ನಮ್ಮ ವಿವೇಚನೆ ಮೇಲಿದೆ. ಈ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯ; ಅದಕ್ಕೆ ಹೊಂದಿ ಕೊಳ್ಳ ಬೇಕಾಗಿದೆ ಎಂದು ಅವರು ಹೇಳಿದರು.
ಕರ್ಣಾಟಕ ಬ್ಯಾಂಕ್ 102 ವರ್ಷಗಳ ಪಯಣ, ಮೈಲುಗಲ್ಲುಗಳ ಕಾಲಘಟ್ಟದಲ್ಲಿ ನಡೆದ ಬದಲಾವ ಪ್ರೇರಣಾದಾಯಕ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣೆ ಮೈಲುಗಲ್ಲು ಎಂದು ನೋಡುವುದಲ್ಲ. ಇದು ಸಂಸ್ಥೆಯ ಬಗ್ಗೆ ಒಂದು ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ. ಈ ಮೂಲಕ ಒಂದು ಪರಂಪರೆ ಗೌರವಿಸುತ್ತಿದ್ದೀರಿ. ಕರ್ಣಾಟಕ ಬ್ಯಾಂಕ್ನ ಮ್ಯೂಸಿಯಂಗೆ ಭೇಟಿ ನೀಡಿದಾಗ ಸ್ಥಾಪಕ ಮಹನೀಯರ ಜೀವನಯಾನ, ಅವರ ಮೌಲ್ಯ ವ್ಯವಸ್ಥೆ ಮತ್ತು ಬ್ಯಾಂಕ್ ಆರಂಭದಿಂದ ಇಂದಿನ ಮಹತ್ತರ ಸಾಧನೆವರೆಗೆ ನಡೆದ ಬೆಳವಣಿಗೆ ನೋಡುವ ಅವಕಾಶ ದೊರೆಯಿತು ಎಂದು ಸ್ಮರಿಸಿದರು.
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಮಾತನಾಡಿ, ವಿಕಸಿತ್ ಭಾರತ್ ದೃಷ್ಟಿಕೋನವು ಬ್ಯಾಂಕ್ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್ ಭಾರತ್ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದರು.
ಬ್ಯಾಂಕ್ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಅವರು ಮಾತನಾಡಿ, ಕರ್ಣಾಟಕ ಬ್ಯಾಂಕ್ ಭವಿಷ್ಯದ ಲ್ಲಿ ಇನ್ನಷ್ಟು ತಂತ್ರಜ್ಞಾನದ ಅಳವಡಿಕೆಯೊಂದಿಗೆ ಸಾಗಲಿದೆ. ಬ್ಯಾಂಕಿನ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಬ್ಯಾಂಕ್ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ ಎಂದು ಹೇಳಿದರು.
ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿ, ಸಮಾರಂಭದಲ್ಲಿ ದೇಬಾಶೀಷ್ ಪಾಂಡ ಅವರನ್ನು ಸನ್ಮಾನಿಸಲಾಯಿತು. ನಾರಿ ತರಂಗಿಣಿ ಸಂಗೀತ ಕಚೇರಿ ನಡೆಯಿತು.



