ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಜನಜಾಗೃತಿ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಪಾಲಿಕೆ ಕಚೇರಿಯವರೆಗೆ ಬೃಹತ್ ಕಾಲ್ನಾಡಿಗೆ ಜಾಥಾ ನಡೆಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಸ್ವತಃ ರಾಜೀವ್ ಗಾಂಧಿಯೇ ತಮ್ಮ ಸರಕಾರ ಒಂದು ರೂಪಾಯಿ ಕೊಟ್ಟರೆ ಅದರಲ್ಲಿ ಕೆಲವೇ ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ಹೇಳಿ ವೈಫಲ್ಯ ವ್ಯಕ್ತಪಡಿಸಿದ್ದರು. ಆದರೆ, ಈಗ ಒಂದೇ ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಆಸ್ಪದವಿಲ್ಲದೇ ನರೇಂದ್ರ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಅದರ ಮುಂದುವರೆದ ಭಾಗವೇ ವಿಬಿ ಜಿ ರಾಮ್ ಜಿ. ವಿಧಿಯಿಲ್ಲದೇ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಅಷ್ಟೇ ಎಂದರು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ವಿಬಿ-ಜಿ ರಾಮ್ ಜಿ ಕಾಯ್ದೆ ಮೂಲಕ ಬಡವರಿಗೆ ದುಡಿಯಲು ಹೆಚ್ಚಿನ ಅವಕಾಶ ನೀಡಿದರೂ, ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದಾರೆ ಎಂದರೆ ಅವರ ಉದ್ದೇಶ ಬೇರೆ ಏನೋ ಇದೆ. ದುಡಿವ ದಿನ 100 ರಿಂದ 125 ಕ್ಕೆ ಏರಿಕೆ ಮಾಡಿದ್ದು ತಪ್ಪಾ? ಇದರಿಂದ ಕಾಂಗ್ರೆಸ್ಸಿಗೆ ಏನು ತೊಂದರೆ ? ಬಡ ಜನರ ಅಭಿವೃದ್ಧಿಗಾಗಿರುವ ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುವ ಕಾಂಗ್ರೆಸ್ಸಿಗರನ್ನು ನಂಬದಿರೋಣ. ಮನರೇಗಾ ಹೆಸರಿನಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಇನ್ನು ಮೇಲೆ ಅದಕ್ಕೆ ಅವಕಾಶವಿಲ್ಲದಿರುವುದೇ ಕಾಂಗ್ರೆಸ್ಸಿಗರ ಅಸಹನೆಗೆ ಕಾರಣ ಎಂದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದು, ಇ -ಖಾತಾ ಸಿಗದೇ, ಜೈಲ್ ಜಾಮರ್ ನಿಂದ ಜನರು ತೊಂದರೆ ಅನುಭವಿಸುತ್ತಿರುವಾಗ, ಕೆಂಪು ಕಲ್ಲು,- ಮರಳು ಸಿಗದೇ ಒದ್ದಾಡುತ್ತಿದ್ದಾಗ ಈ ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿದ್ರಾ? ಪ್ರಿಯಾಂಕ್ ಖರ್ಗೆ ನಮ್ಮ ಕರಾವಳಿ ಬಗ್ಗೆ ಹೇಳಿಕೆ ನೀಡುವ ಮೊದಲು ಅವರ ಜಿಲ್ಲೆಗಿಂತ ನಮ್ಮ ಈ ಭಾಗ ಎಷ್ಟು ಮುಂದುವರಿದಿದೆ ಎಂಬುದನ್ನು ತಿಳಿದುಕೊಳ್ಳಲಿ. ಐಟಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಈ ಭಾಗ ನೀಡಿದ ಕೊಡುಗೆಯನ್ನು ಅರಿಯಲಿ ಎಂದರು.
ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ತಿಲಕ್ ರಾಜ್ ಕೃಷ್ಣಾಪುರ, ಪೂರ್ಣಿಮಾ ಎಂ., ಸಂಜಯ್ ಪ್ರಭು, ಶಾನವಾಜ್, ಜಗನ್ನಾಥ್, ಸುಧೀರ್ ಶೆಟ್ಟಿ ಕಣ್ಣೂರು, ನಂದನ್ ಮಲ್ಯ, ವಸಂತ್ ಜೆ.ಪೂಜಾರಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಜಗೋಪಾಲ್ ರೈ, ನಿಕಟಪೂರ್ವ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.



