ಉಜಿರೆ: ರಾಜ್ಯದ ವಿವಿಧ ಕಡೆಗಳಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದ 70 ಸಾವಿರಕ್ಕೂ ಹೆಚ್ಚು ಭಕ್ತರು ಶಿವ ಪಂಚಾಕ್ಷರಿ ಪಠಣದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಗುರು ಹನುಮಂತಪ್ಪ ಮತ್ತು ಮರಿಯಪ್ಪ ನೇತೃತ್ವದಲ್ಲಿ 7 ಮಂದಿ ಯೊಂದಿಗೆ ಪಾದಯಾತ್ರೆ ಪ್ರಾರಂಭ ಆಗಿತ್ತು. ಈ ಬಾರಿ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ 70 ಸಾವಿರ ಮಂದಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದೀರಿ. ಸ್ವಾಮಿಯ ದರ್ಶನ, ಸೇವೆಯ ಫಲ ದೊರೆತು ಲೋಕ ಕಲ್ಯಾಣ ಆಗಲಿ ಎಂದರು.

ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಪಾದಯಾತ್ರೆ ರೂವಾರಿ ಗುರು ಹನುಮಂತಪ್ಪ ಸ್ವಾಮೀಜಿ, ಮರಿಯಪ್ಪ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣರಾವ್, ಹೆಗ್ಗಡೆ ಅವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಇದ್ದರು.
ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು. ಭಕ್ತರು ದೇವರ ದರ್ಶನ ಮಾಡಿ ಎಳನೀರಿನ ಅಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.
ಬೆಂಗಳೂರಿನಿಂದ ಬಂದಿದ್ದ 1.75 ಲಕ್ಷ ಮಂದಿಗೆ ಉಚಿತವಾಗಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಮತ್ತು ಬಳಗ (80 ಸ್ವಯಂಸೇವಕರು) ಯಲಹಂಕದ ತಿಮ್ಮಾರೆಡ್ಡಿ ಮತ್ತು ಬಳಗ ಆನೇಕಲ್ ಮುನಿರೆಡ್ಡಿ ಮತ್ತು ಬಳಗ ಹೊಸೂರು ರಾಜ ರೆಡ್ಡಿ ಮತ್ತು ಬಳಗ ಆನೇಕಲ್ ಗೋಪಾಲ ರೆಡ್ಡಿ ಮತ್ತು ಬಳಗ ಸರ್ಜಾಪುರ ಬಸವರಾಜ ಮತ್ತು ಬಳಗ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಮಲ್ಲೇಶ್ವರಂ ಬೆಂಗಳೂರು ನಾಗರಬಾವಿ ಪುಷ್ಪಮಂಜು ಬಳಗದಿಂದ ತಲಾ 50 ಸ್ವಯಂಸೇವಕರು ಮಾಲೂರು ರಾಮಕೃಷ್ಣ ಮತ್ತು ಬಳಗ (30) ಶ್ರೀಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಬೀರೂರು (25) ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ ನಾಗರಬಾವಿ ಬೆಂಗಳೂರು ಕೃಷ್ಣ ರೆಡ್ಡಿ ಆನೇಕಲ್ ಬೆಂಗಳೂರು ತಂಡದಿಂದ ತಲಾ 100 ಮಂದಿ ಸೇರಿ 12 ತಂಡಗಳಲ್ಲಿ 635 ಸ್ವಯಂಸೇವಕರು ಅನ್ನದಾಸೋಹ ಸೇವೆ ನಡೆಸಿದರು.



