
ಮಂಗಳೂರು: ಸದನವನ್ನು ಶಿಸ್ತಿನಿಂದ ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಎಲ್ಲ ಸದಸ್ಯರ ಜವಾಬ್ದಾರಿ. ಜನರು ಸಭೆಯ ಕಲಾಪ ವೀಕ್ಷಿಸುತ್ತಾರೆ, ನಮ್ಮನ್ನು ಗಮನಿಸುತ್ತಾರೆ ಎನ್ನುವ ಅರಿವು ಪ್ರತಿ ಶಾಸಕರಲ್ಲಿಯೂ ಬರಬೇಕು. ಶಾಸಕರು ತಮ್ಮ ಗೌರವ ಉಳಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಸ್ಪೀಕರ್ ಯು. ಟಿ. ಖಾದರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ವಿಧಾನಸಭೆ 224 ಶಾಸಕರಲ್ಲಿ ಕೆಲ ಶಾಸಕರ ವರ್ತನೆ ಅಶಿಸ್ತಿನಿಂದ ಕೂಡಿರುತ್ತದೆ. ಇನ್ನು ಕೆಲ ಶಾಸಕರ ವರ್ತನೆ ಈ ರೀತಿಯಾಗಿ ಇರೋದಿಲ್ಲ. ವಿಧಾನಸಭೆಯ ಸದನದಲ್ಲಿ ಯಾರಿಂದ ತಪ್ಪುಗಳು ನಡೆಯುತ್ತವೆಯೋ ಅಂತಹರಿಂದಲೇ ತಪ್ಪುಗಳು ಮರುಕಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿರುವ ಕುರಿತು ಕೇಳಿದ ಪ್ರಶ್ಮೆಗೆ ಉತ್ತರಿಸಿದ ಅವರು, ಸದನ ಎಲ್ಲರಿಗೂ ಒಂದು ರೀತಿಯಲ್ಲಿ ಮನೆಯ ಕುಟುಂಬ ಇದ್ದಂತೆ. ಇಂತಹ ಚರ್ಚೆಗಳು ಹಿಂದೆ ಕೂಡ ಆಗಿವೆ. ಪ್ರೀತಿಯಿಂದ ಮಾತಾಡುವಾಗ, ಸಹೋದರರ ನಡುವೆ ನಡೆಯುವ ಚರ್ಚೆಯಂತೆ ಏರುಪೇರು ಆಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವಾಗ ಭಾವನಾತ್ಮಕ ಮಾತುಗಳು ಬಂದು ಬಿಡುತ್ತವೆ. ಇದನ್ನು ಬಗೆಹರಿಸಿಕೊಂಡು ಹೋಗುವುದು ಸದನದ ಸಂಸ್ಕೃತಿ ಹಾಗೂಗೌರವ ಕೂಡ ಎಂದರು.
ಎಲ್ಲವನ್ನೂ ಕಾನೂನು, ನಿಯಮಗಳಿಂದಲೇ ಜಾರಿಗೆ ತರಲು ಸಾಧ್ಯವಾಗದು. ಶಾಸಕರಿಗೆ ತಮ್ಮ ಹೊಣೆಗಾರಿಕೆ ಅರಿವು ಇರಬೇಕು. ಕಾನೂನು ಮತ್ತು ನಿಯಮದ ಬಗ್ಗೆ ತಿಳಿವಳಿಕೆ ಇರುವವರೇ ಶಾಸಕರಾಗಿ ಆಯ್ಕೆಯಾಗಿ ಬರುತ್ತಾರೆ ಎಂದರು.


