
ಕಾರವಾರ: ಶಾಲೆಗಳಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಸಂಭ್ರಮ ಶನಿವಾರ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಠಾಣೆಗಳಿಂದ ಶಾಲೆಗಳಿಗೆ ಭೇಟಿ ನೀಡಿ ತೆರೆದ ಮನೆ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಚರಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ, ಕಾರವಾರ ಉಪ ವಿಭಾಗದ ಮಕ್ಕಳ ಕಲ್ಯಾಣಾಧಿಕಾರಿ, ಸಹಾಯಕ ಮಕ್ಕಳ ಕಲ್ಯಾಣಾಧಿಕಾರಿ ಅವರಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿಗಳ ಜತೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೆರೆದ ಮನೆ ಕಾರ್ಯಕ್ರಗಳನ್ನು 16 ವರ್ಷದೊಳಗಿನ ಮಕ್ಕಳಿಗೆ ಮಾತ್ರ ನಡೆಸುತ್ತಿದ್ದು, ಪದವಿ ಕಾಲೇಜು, ಐ.ಟಿ.ಐ, ಪ್ಯಾರಾಮೆಡಿಕಲ್ ಕಾಲೇಜು, ನರ್ಸಿಂಗ್ ಪಾಲಿಟೆಕ್ನಿಕ್ ಕಾಲೇಜಿನ ಮಕ್ಕಳಿಗೆ ಕೂಡ ಹೆಚ್ಚಿನ ಕಾರ್ಯಕ್ರಗಳನ್ನು ನಡೆಸುವಂತೆ ಮತ್ತು ಈ ಮಕ್ಕಳಿಗೆ ವಿಶೇಷವಾಗಿ 1098 ಮಕ್ಕಳ ಸಹಾಯವಾಣಿ ಬಗ್ಗೆ, 112 ತುರ್ತು ಸಹಾಯವಾಣಿ ಹಾಗೂ ಇದರ ಜತೆಗೆ ಪೋಕ್ಸೋ ಪ್ರಕರಣಗಳು. ಜೆ.ಜೆ. ಕಾಯ್ದೆಗಳ ಬಗ್ಗೆ ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಾಣಿಕೆ, ಬಾಲಕಾರ್ಮಿಕ ಕಾಯ್ದೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದನ್ನು ತಡೆಗಟ್ಟಲು ಸ್ತ್ರೀ ಶಕ್ತಿ ಸಂಘ, ಸಂಜಿವಿನಿ ಒಕ್ಕೂಟ, ಧರ್ಮಸ್ಥಳ ಸಂಘಗಳು ಹಾಗೂ ಇತರೇ ಸಂಘಗಳಿಗೆ ಭೇಟಿ ನೀಡಿ ಅಪರಿಚಿತರಿಂದ ಸಂಬಂಧಿಕರಿಂದ ಅಣ್ಣ-ತಮ್ಮಂದಿರಿಂದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವುದರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯುತ ತಂತಿ ತಗಲಿ ಸಾವನ್ನಪ್ಪಿದ ಮಕ್ಕಳ ಪ್ರಕರಣಗಳ ಮಾಹಿತಿಯ ಬಗ್ಗೆ ಚರ್ಚಿಸಿದರು ಇದರಲ್ಲಿ ಪ್ರಕರಣಗಳ ತನಿಖೆಯಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷತನ ಕಂಡು ಬಂದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಬಗ್ಗೆ ಕ್ರಮ ವಹಿಸುವಂತೆ ಮತ್ತು ಜಿಲ್ಲೆಯಲ್ಲಿ ದಾಖಲಾದ ಯು.ಡಿ.ಆರ್. ಪ್ರಕರಣಗಳಲ್ಲಿ ಕಳೆದ 2 ವರ್ಷದಲ್ಲಿ ಕೃಷಿ ಹೊಂಡಗಳಲ್ಲಿ ಬಿದ್ದು ಸಾವನ್ನಪ್ಪಿದ ಮಕ್ಕಳ ಬಗ್ಗೆ ಚರ್ಚಿಸಿ, ಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಸಿರುವ ಬಗ್ಗೆ ಖಚಿತ ಪಡಿಸಿಕೊಂಡು ಹಾಗೂ ಸುರಕ್ಷಿತವಾಗಿ ತಂತಿ ಬೇಲಿ ಅಳವಡಿಸದೇ ಇದ್ದಲ್ಲಿ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ 20 ರಿಂದ 30 ವರ್ಷದವರು ಹೆಚ್ಚಿನ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗಳಾಗಿರುವುದು ಕಂಡು ಬರುತ್ತಿದ್ದು ಈ ಕುರಿತು 16 ವರ್ಷ ಮೇಲ್ಪಟ್ಟ ಎಲ್ಲಾ ಪದವಿ ಪೂರ್ವ ಹಾಗೂ ಪದವಿ ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಇಲಾಖೆಯಿಂದ ಅರಿವು ಕಾರ್ಯಕ್ರಮಗಳನ್ನು ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಆರ್.ಸಿ.ಎಚ್. ಪೊರ್ಟ್ ಲನಲ್ಲಿ ಮತ್ತು ಪೊಲೀಸ್ ಇಲಾಖೆಯ ಠಾಣಾವಾರು ದಾಖಲಾಗುತ್ತಿರುವ ಪೋಕ್ಸೋ ಪ್ರಕರಣಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದ್ದು ಆರೋಗ್ಯ ಇಲಾಖೆಯಲ್ಲಿ ಆರ್.ಸಿ.ಎಚ್. ಪೊರ್ಟ್ ಲನಲ್ಲಿ ದಾಖಲು ಮಾಡಿದ ಪ್ರಕಣಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತೀರಿ. ಎಂಬ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ದಾಖಲಾಗುತ್ತಿರುವ ಪೋಕ್ಸೋ, ಅಪಹರಣ, ಕಾನೂನು ಸಂಘರ್ಷಕ್ಕೊಳಗಾಗುತ್ತಿರುವ ಹಾಗೂ ಇನ್ನಿತರ ಪ್ರಕರಣಗಳನ್ನು ಪರಿಶೀಲಿಸಿದಾಗ ಹೆಚ್ಚಿನ ಪ್ರಕರಣಗಳಲ್ಲಿ ಶಾಲೆಗಳಲ್ಲಿ ಗೈರು ಹಾಜರಿರುವ ಮತ್ತು ಶಾಲೆ ಬಿಟ್ಟ ಮಕ್ಕಳಲ್ಲಿ ನೊಂದವರು ಇಲ್ಲವೇ ಕಾನೂನು ಸಂಘರ್ಷಕ್ಕೊಳಗಾಗುವ ಮತ್ತು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ಮಕ್ಕಳ ಮೇಲೆ ನಿಗಾ ವಹಿಸಲು ಶಿಕ್ಷಣ ಇಲಾಖೆಯಿಂದ ಪೊಲೀಸ್ ಇಲಾಖೆಗೆ ಶಾಲೆಗಳಲ್ಲಿ ಗೈರು ಹಾಜರಿರುವ ಮತ್ತು ಶಾಲೆ ಬಿಟ್ಟ ಮಕ್ಕಳ ಮಾಹಿತಿ ನೀಡುವುದು. ಹಾಗೂ ಇಂತಹ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆಯಿಂದ ಕೂಡಾ ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಪೊಲೀಸ್ ಉಪಾಧೀಕ್ಷಕ ಎಸ್.ವಿ. ಗಿರೀಶ್, , ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಗಳು ಎಸ್.ಜೆ.ಪಿ.ಯು ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹೇಶ ಮುಕ್ರಿ ಇದ್ದರು.


