
ಮಂಗಳೂರು: ಮೀನು ಒಂದು ಪೌಷ್ಟಿಕ ಆಹಾರ ಆಗಿದ್ದು, ಸಮತೋಲನ ಆಹಾರದ ಸೇವನೆ ಅತ್ಯಗತ್ಯತೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ವೀರಣ್ಣ ಅವರು ಹೇಳಿದರು.
ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಅಧೀನದಲ್ಲಿರುವ ಹೊಯ್ ಗೆ ಬಜಾರ್ ಆವರಣದಲ್ಲಿರುವ ‘ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ನ ಪ್ರಾಯೋಜಿತ ಯೋಜನೆ ಆಡಿ ನಿರ್ಮಿಸಲ್ಪಟ್ಟ ‘ಮೀನುಗಾರಿಕೆಯಲ್ಲಿ ಕೌಶಲ ಅಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ದ ವತಿಯಿಂದ ‘ಅಕ್ವೇರಿಯಂ ತಯಾರಿಕೆ, ನಿರ್ವಹಣೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಸಾಕಣೆ’ ಎಂಬ ಶಿರ್ಷಿಕೆಯಲ್ಲಿ 6 ದಿನಗಳವರೆಗೆ ನಡೆಸಲಾಗುವ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ಆಹಾರದ ಪದ್ದತಿಯಲ್ಲಿ ಮೀನಿನ ಬಳಕೆ ಅತೀ ಮುಖ್ಯ ಆಗಿದೆ. ಬೇಡಿಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೀನಿನ ಸೇವನೆ ಅತ್ಯಮೂಲ್ಯ, ದೀರ್ಘ ಕಾಲ ಜೀವಿಸಲು ಸಹಕಾರಿ ಆಗಿದೆ ಎಂದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್. ಅವರು ಮಾತನಾಡಿ, ಈ ತರಬೇತಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಇತರೆ ಜಿಲ್ಲೆಗಳ ಆಸಕ್ತ ಯುವಕ-ಯುವತಿಯರಿಗೂ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಕೊಡುವುದರ ಗುರಿ ಹೊಂದಿದೆ ಎಂದರು.
ಸ್ಮಾರ್ಟ್ ಸಿಟಿಯ ಪ್ರದೇಶಾಧಾರಿತ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಮೀನುಗಾರಿಕಾ ಕಾಲೇಜು ಅತ್ಯುತ್ತಮ ಸಂಸ್ಥೆಯಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ (ವಿದ್ಯಾರ್ಥಿ ಕಲ್ಯಾಣ) ಡಾ. ಎ.ಟಿ. ರಾಮಚಂದ್ರ ನಾಯ್ಕ್ ಅವರು ಮಾತನಾಡಿ, ಅಕ್ವೇರಿಯಂಗಳನ್ನು ಮನೆಗಳಲ್ಲಿ ಇಟ್ಟರೆ ಮಾನವನಿಗೆ ಬರುವ ಸಹಜವಾದ ಮಾನಸಿಕ ರೋಗಗಳನ್ನು ನಿವಾರಿಸಲು ಸಹಕಾರಿ ಮತ್ತು ಬಣ್ಣಬಣ್ಣದ ಮೀನುಗಳ ಚಲನವಲನಗಳನ್ನು ಅಕ್ವೇರಿಯಂಗಳಲ್ಲಿ ವೀಕ್ಷಿಸಿದರೆ ದಣಿದು ಬಂದ ಜೀವಕ್ಕೆ ಹುಮ್ಮಸ್ಸು ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಮನಸ್ಸಿಗೆ ಆನಂದವನ್ನೂ ಸಹಾ ಕೊಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಚ್.ಎನ್. ಅಂಜನೇಯಪ್ಪ ಅವರು ಮಾತನಾಡಿ, ಈ ಕೇಂದ್ರವು ನಿರುದ್ಯೋಗಿ ಯುವಕ-ಯುವತಿಯರು, ಯುವ ಉದ್ಯಮಿಗಳು, ವಿಸ್ತರಣಾ ಕಾರ್ಯಕರ್ತರು, ಸ್ವ-ಉದ್ಯೋಗಾಂಕ್ಷಿ ಯುವಕರು ಹಾಗೂ ಮೀನುಗಾರರು ಮತ್ತು ಕೃಷಿಕರಿಗೆ ಸಹಕಾರಿಯಾಗಿದೆ. ಕೇಂದ್ರದಲ್ಲಿ ಭಾಗವಹಿಸುವವರಿಗೆ ಸ್ವ-ಉದ್ಯೋಗ ಮತ್ತು ಆದಾಯ ಉತ್ಪಾದನಾ ಚಟುವಟಿಕೆಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.
ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ.ಎಸ್. ವರದರಾಜು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಸಹಾಯಕ ಅಭಿಯಂತರ ಅನಂತ್ ಎಸ್. ಶಂಕರ್, ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿಗಳು, ತರಬೇತಿಗೆ ಆಗಮಿಸಿದ್ದ 30 ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಇದ್ದರು.
ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದ ಸಂಯೋಜಕ ಹಾಗೂ ಮತ್ತು ಮೀನುಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕುಮಾರನಾಯ್ಕ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಶೀತಲ್ ಕೆ.ಯು. ನಿರೂಪಿಸಿದರು.


