ಮಂಗಳೂರು: ಪ್ರಸಿದ್ದ ಮಂಗಳೂರು ದಸರಾ ಹಬ್ಬಕ್ಕೆ ಇಡೀ ನಗರವು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ನಗರದ ಪಿವಿಎಸ್ ವೃತ್ತದ ಬಳಿ ನವರಾತ್ರಿಯ ಮೊದಲನೇ ದಿನ ಸೋಮವಾರ ಶಾಸಕ ವೇದವ್ಯಾಸ ಕಾಮತ್ ಅವರು ದೀಪಾಲಂಕಾರವನ್ನು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಮಂಗಳೂರು ದಸರಾ ನಮ್ಮ ಜಿಲ್ಲೆಯ ಹೆಮ್ಮೆಯ ಸಂಕೇತ ಆಗಿದ್ದು, ದೇಶ ವಿದೇಶಗಳಿಂದ ಭಕ್ತರನ್ನು, ಪ್ರವಾಸಿಗರನ್ನು ಸೆಳೆವ ಇಂತಹ ಹಬ್ಬದ ಸಂದರ್ಭದಲ್ಲಿ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಶೇಷವಾಗಿ ಚಿಂತನೆ ನಡೆಸಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಅಂದಿನ ಬಿಜೆಪಿ ಆಡಳಿತದ ಪಾಲಿಕೆ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರು, ಹೀಗೆ ಎಲ್ಲರೂ ಒಕ್ಕೊರಲಿನಿಂದ ಸಹಕಾರವನ್ನು ನೀಡಿದ್ದರು. ವರ್ಷಕ್ಕೆ 50 ರಿಂದ 60 ಲಕ್ಷದವರೆಗೆ ವೆಚ್ಚ ಆಗುವ ಈ ದೀಪಾಲಂಕಾರದಿಂದಾಗಿ ದೇವಸ್ಥಾನಗಳಿಗೆ ಇದುವರೆಗೆ ಸುಮಾರು ಮೂರುವರೆ ಕೋಟಿ ಉಳಿತಾಯವಾದಂತಾಗಿದೆ. ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಎಲ್ಲೆಡೆ ದಸರಾ ಸಂದರ್ಭದಲ್ಲಿ ದೀಪಾಲಂಕಾರವನ್ನು ಕಂಡಾಗ ಮನಸ್ಸಿಗೆ ಅತ್ಯಂತ ಖುಷಿ ಆಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರವೀಣ್ ನಿಡ್ಡೆಲ್, ಜಯಕುಮಾರ್, ಪೂರ್ಣಿಮಾ ರಾವ್, ಮನೋಹರ್ ಕದ್ರಿ, ಕಿಶೋರ್ ಕೊಟ್ಟಾರಿ, ಲೀಲಾವತಿ ಪ್ರಕಾಶ್, ಸಂದೀಪ್ ಗರೋಡಿ, ಶೈಲೇಶ್ ಶೆಟ್ಟಿ ಇದ್ದರು.