ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇದೇ 22 ರಿಂದ ಅ. 3 ರವರೆಗೆ ಮಂಗಳೂರು ದಸರಾ ನವರಾತ್ರಿ ಉತ್ಸವ ನಡೆಯಲಿದ್ದು, ಸೆ. 22 ರಂದು ಬೆಳಿಗ್ಗೆ 8.30 ಕ್ಕೆ ಗುರು ಪ್ರಾರ್ಥನೆ, ಮಧ್ಯಾಹ್ನ 12 ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶಾರದಾ ಮಾತೆ ಪ್ರತಿಷ್ಠಾಪನೆದ ಜತೆಗೆ ಆರಂಭ ಆಗಲಿದ್ದು, ಅ. 3 ರವರೆಗೆ ಕೇಂದ್ರದ ಮಾಜಿ ಸಚಿವರು, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಆವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ ಅದ್ದೂರಿಯಾಗಿ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.22 ರಂದು ಬೆಳಿಗ್ಗೆ 11.30 ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಅವರು ಬಿ.ಜನಾರ್ದನ ಪೂಜಾರಿ ಅವರ ಸಮ್ಮುಖದಲ್ಲಿ ಚಾಲನೆ ಸಿಗಲಿದೆ ಎಂದರು.
ಸೆ. 21 ರಂದು ಸಂಜೆ ಕೇತ್ರದ ನವ ನಿರ್ಮಾಣದ ರೂವಾರಿ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಸೆ. 22 ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್ಎಂಪಿಟಿ ಅಧ್ಯಕ್ಷ ಡಾ. ವೆಂಕಟರಮಣ್ ಅಕ್ಕರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯದ ಮುಖ್ಯಸ್ಥ ರಾಜೇಂದ್ರರ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ, ವೈಟ್ಡೌಸ್ , ಎಂ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್, ಭರತ ನಾಟ್ಯದಲ್ಲಿ ಗೊಲ್ಡನ್ ಬುಕ್ ಆಫ್ ವರ್ಲ್ಡ್. ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಸೆ. 25 ರಂದು ಸಂಜೆ 6 ಗಂಟೆಗೆ ಸ್ಪೀಕರ್ ಯು.ಟಿ. ಖಾದರ್, ಲೋಕಸಭೆ ಸದಸ್ಯ ಬ್ರಿಜೇಶ್ ಚೌಟ, ಎಐಸಿಸಿ ಕೆ.ಸಿ. ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಸೆ. 28 ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ಬಿಲ್ಲವ ಮಹಿಳಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಲಾ ವೈಭವ: ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕವೇ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಮಂಗಳೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ. 40 ತಂಡಗಳ 500 ಕ್ಕೂ ಅಧಿಕ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ, ಯಕ್ಷಗಾನ ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್ಬಂಧಿ, ಸಪ್ತ ವೀಣಾವಾದನ ಹಾದೂ ಪ್ರದರ್ಶನ ನವರಸಗಳ ಸಮ್ಮಿಲನ ಈ ಬಾರಿ ವಿಶೇಷತೆ ಪಡೆದುಕೊಂಡಿವೆ ಎಂದರು.
ಸಾಹಿತ್ಯ ವೈಭವ: ಸೆ. 23 ರಂದು ಸಂಜೆ 4 ಗಂಟೆಗೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೆ. 24 ರಂದು ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆ ನಡೆಯಲಿದೆ. 26 ರಂದು ಯುವಕರನ್ನು ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ‘ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಆಯೋಜಿಸಲಾಗಿದೆ. ದಸರಾ ಮ್ಯಾರಾಥನ್ ಆಯೋಜಿಸಲಾಗಿದೆ ಎಂದರು.
ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟನಲ್ಲಿ ಇದೇ 28 ರಂದು ಬೆಳಿಗ್ಗೆ 9.30 ಕ್ಕೆ ‘ಮಕ್ಕಳ ದಸರಾ’ ಪರಿಕಲ್ಪನೆ ಅಡಿ ಮಕ್ಕಳಿಗಾಗಿಯೇ ಕಿನ್ನಿಪಿಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆಯನ್ನು ಆಕರ್ಷಕ ಬಹುಮಾನ ನೀಡುವ ಜತೆಗೆ ಆಯೋಜಿಸಲಾಗಿದೆ.
ಅಸಾಮಾನ್ಯ ಸ್ತ್ರಿ ಪುರಸ್ಕಾರ ಪ್ರದಾನ ಈ ಪುರಸ್ಕಾರ ನಮ್ಮ ಕ್ಷೇತ್ರದ ಗೌರವಕ್ಕೆ ಬಹುದೊಡ್ಡ ಗರಿಮೆ, 22ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ದಸರಾದಲ್ಲಿ ನವಶಕ್ತಿಗಳ ಆಶೀರ್ವಾದದೊಂದಿಗೆ ಪ್ರತಿದಿನ ಒಬ್ಬರಂತೆ ಸಂಜೆ 7.30 ಕ್ಕೆ 9 ಸಾಧಕಿಯರಿಗೆ ಅಸಾಮಾನ್ಯ ಸ್ತ್ರಿ ಪುರಸ್ಕಾರ 2025 ರನ್ನು ನೀಡಿ ಗೌರವಿಸಲಾಗುವುದು ವನಜಾ ಪೂಜಾರಿ (ಸಾಮಾಜಿಕ-ಮೋಕ್ಷಧಾನು), ವೆಂಕಮ್ಮ ಕುಡಂಬೆಟ್ಟು (ಪ್ರಸೂತಿ ತಜ್ಞೆ), ಶಾಲೆಟ್ (ಸಾಮಾಜಿಕ- ಮೂಕಪ್ರಾಣಿಗಳ ಆರೈಕೆ), ಸುಶೀಲಾ ಪಾಣಾರ (ಪಾರ್ದನ), ಯೋಗಾಕ್ಷಿ ಗಣೇಶ್ (ತೆಂಕುತಿಟ್ಟು ಮಹಿಳಾ ಯಕ್ಷಗಾನ ಮೇಳದ ಸಂಚಾಲಕಿ), ಜಾನಕಿ ಕೊಡ್ಯಡ್ಕ (ನಾಟಿ ವೈದ್ಯ) ತಬಸ್ಸುಮ್ (ಸಾಮಾಜಿಕ-ಅನಾಥ ಎಚ್.ಐ.ವಿ ಪೀಡಿತ ಮಕ್ಕಳ ಆರೈಕೆ), ಬಿ.ಎಂ.ರೋಹಿಣಿ ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರ), ರೋಹಿಣಿ ಜಗರಾಮ್ (ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗ) ಇವರ ಅಪ್ರತಿಮ ಸಾಧನೆ ಗುರುತಿಸಿ ಅಸಾಮಾನ್ಯ ಶ್ರೀ ಪುರಸ್ಕಾರ ಪ್ರದಾನ ನೆರವೇರಲಿದೆ ಎಂದರು.
ಅ 2 ರಂದು ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದದಲ್ಲಿ ಸಂಜೆ 4 ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆ ಕ್ಷೇತ್ರದಿಂದ ಹೊರಟು ನಗರ ಪ್ರದಕ್ಷಿಣೆ ಬಳಿಕ ಚಿತ್ರಾ ಟಾಕೀಸ್ ಅಳಕೆಯಾಗಿ ಮತ್ತೆ ಕ್ಷೇತ್ರಕ್ಕೆ ಬರಲಿದ್ದು, ನಂತರ ವಿಸರ್ಜನೆಗೊಳ್ಳಲಿದೆ ಎಂದರು.
ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಸೋಮರಾಜ್, ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್,ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಜಗದೀಪ್ ಸುವರ್ಣ, ಕೃತಿನ್ ಅಮಿನ್, ಮಾಜಿ ಶಾಸಕ ಹರೀಶ್ ಕುಮಾರ್ ಬೆಳ್ತಂಗಡಿ, ರಾಧಾಕೃಷ್ಣ, ಹರಿಕೃಷ್ಣ ಬಂಟ್ವಾಳ ಜಗದೀಪ್ ಸುವರ್ಣ, ಕೃತಿನ್ ಅಮಿನ್, ಶೈಲೇಂದ್ರ ಸುವರ್ಣ, ಹರೀಶ್ ಸುವರ್ಣ, ಲತೇಶ್ ಕೋಟ್ಯಾನ್, ರಾಧಾಕೃಷ್ಣ ಇದ್ದರು.