ಮಂಗಳೂರು: ದೀಪಾವಳಿ ಹಬ್ಬಕ್ಕೆ ನೈರುತ್ಯ ರೈಲ್ವೆಯಿಂದ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ಮಾಡಲಿದೆ ಎಂದು ಸಂಸದ ಕ್ಯಾ. ಬೃಜೇಶ್ ಚೌಟ ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮನವಿಗೆ ತುರ್ತು ಸ್ಪಂದನೆ ನೀಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಯಶವಂತಪುರ- ಮಂಗಳೂರು (06565) ವಿಶೇಷ ರೈಲು ಅ.30 ರಂದು ರಾತ್ರಿ 11.50 ಕ್ಕೆ ಯಶವಂತಪುರದಿಂದ ಹೊರಟು ಮರು ದಿನ ಬೆಳಿಗ್ಗೆ 11.45 ಕ್ಕೆ ಮಂಗಳೂರಿಗೆ ಬಂದು ತಲುಪಲಿದೆ. ಮಂಗಳೂರು- ಯಶವಂತಪುರ ವಿಶೇಷ ರೈಲು ಮಂಗಳೂರಿನಿಂದ ಅ. 31 ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಅದೇ ದಿನ ರಾತ್ರಿ 9.15 ಕ್ಕೆ ಯಶವಂತಪುರವನ್ನು ತಲುಪಲಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಅಂಗವಾಗಿ ಮಂಗಳೂರು ಹಾಗೂ ಉಡುಪಿ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚಾರ ಮಾಡುತ್ತಾರೆ. ಹಬ್ಬದ ವೇಳೆ ಪ್ರಯಾಣಿಕರು ಸಂಚಾರಕ್ಕೆ ಪರದಾಟ ನಡಿಸದೇ ಇರಲಿ ಎಂಬ ಉದ್ದೇಶದಿಂದ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಸಚಿವದ್ವಯರು ತುರ್ತು ಸ್ಪಂದನೆ ಮಾಡಿದ್ದಾರೆ, ಇದರ ಜತೆಗೆ ಇಲಾಖೆ ಅಧಿಕಾರಿಗಳು ಕೂಡ ಸೂಕ್ತ ಸ್ಪಂದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.