ಬೆಳಗಾವಿ: ನಾನು ಯಡಿಯೂರಪ್ಪ ಅವರ ಮಗ, ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ರಮೇಶ ಜಾರಕಿಹೊಳಿ ಮತ್ತು ಕೆಲವರು ಇನ್ನೂ ನನ್ನನ್ನು ಒಪ್ಪಿಕೊಂಡಿಲ್ಲ. ಅವರಿಗೆ ಇನ್ನೂ ಕೆಲವು ಸಮಯ ಬೇಕಾಗಬಹುದು. 2 ವರ್ಷವಾದರೂ ಒಪ್ಪಿಕೊಳ್ಳಲು ಸಮಯ ಸಾಕಾಗಲಿಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಆದರೆ, ಕೆಲವರಿಗೆ 2 ವರ್ಷ ಬೇಕಾಗುತ್ತದೆ. ಇನ್ನೂ ಕೆಲವರಿಗೆ 3 ವರ್ಷ ಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪನವರಿಗೂ ಕೆಲವರು ಯಾವ ರೀತಿಯಲ್ಲಿ ತೊಂದರೆ ಕೊಟ್ಟಿದ್ದಾರೆ ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಆದರೆ ಎಂದೂ ಅವರು ಹೆದರಿ ಓಡಿ ಹೋಗಲಿಲ್ಲ, ನಾನು ಕೂಡ ಹಾಗೇಯೇ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಯಾವುದೇ ಕ್ಷಣದಲ್ಲಿ ಅವರು ರಾಜೀನಾಮೆ ನೀಡಬಹುದು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೊಸ ಮುಖ್ಯಮಂತ್ರಿ ಸ್ವಾಗತಿಸುತ್ತೀರಿ ಎಂದರು.
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ವಿಠಲ ಹಲಗೇಕರ್, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ್, ಅನಿಲ ಬೆನಕೆ, ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಸುಭಾಷ ಪಾಟೀಲ, ಮಹಾಂತೇಶ ಕವಟಗಿಮಠ ಇದ್ದರು.