ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡುಬಿದಿರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮೊತ್ತದಲ್ಲಿ ಕೀರ್ತಿಶೇಷ ಲೋಕನಾಥ ಬೋಳಾರ್ ಅವರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಹೈಟೆಕ್ ಮಾದರಿಯ ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಇದೇ 14 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಭಾಗದ ವೇಟ್ ಲಿಫ್ಟರ್ ಗಳ ಬಹುದಿನಗಳ ಕನಸು ಈಡೇರಿದೆ.
ಒಲಿಂಪಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಅವರು ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರದ ಉದ್ಘಾಟನೆ ಮಾಡಲಿದ್ದಾರೆ. ಸತೀಶ್ ರೈ ಅವರ ಕ್ರೀಡಾ ಸಾಧನೆಗೆ ಏಕಲವ್ಯ ಪ್ರಶಸ್ತಿ, ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ದಾಖಲೆ ಜತೆಗೆ 4 ಬೆಳ್ಳಿ, ಕಾಮನ್ ವೆಲ್ತ್ ಚಾಂಪಿಯನ್ ಷಿಪ್ ನಲ್ಲಿ ಮೂರು ಬಾರಿ ಚಿನ್ನ, ಏಷಿಯನ್ ಚಾಂಪಿಯನ್ ಷಿಪ್ ಕಂಚು, ಏಷಿಯನ್ ಗೇಮ್ಸ್ ನಲ್ಲಿ ಎರಡು ಬಾರಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ಇವರದು. ವಿಶ್ವ ಚಾಂಪಿಯನ್ ಷಿಪ್ ಎರಡು ಬಾರಿ, ಎಸ್ ಎಎಫ್ ಗೇಮ್ಸ್ 2 ಬಾರಿ ಚಿನ್ನ, ನ್ಯಾಷನಲ್ ಗೇಮ್ಸ್ ನಲ್ಲಿ 4 ಬಾರಿ ಚಿನ್ನ, ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ 14 ಬಾರಿ ಚಿನ್ನ, ಬೆಸ್ಟ್ ಲಿಫ್ಟರ್ ನ್ಯಾಷನಲ್ ಚಾಂಪಿಯನ್ ಷಿಪ್ 5 ಬಾರಿ, 24 ಬಾರಿ ಅಂತರ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಷಿಪ್ ಗೆ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ 34 ಬಾರಿ ರಾಷ್ಟ್ರ ಮಟ್ಟದಲ್ಲಿ ದಾಖಲೆ ಬರೆದ ಕ್ರೀಡಾಪಟುವು ಈ ಕೇಂದ್ರ ಉದ್ಘಾಟನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯೇ ಸರಿ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ದಿವಂಗತ ಲೋಕನಾಥ ಬೋಳಾರ್ ಅವರು ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಪ್ರತಿಮ ಕ್ರೀಡಾ ಸಾಧಕ. ಇಂತಹ ಕ್ರೀಡಾ ಸಾಧಕ ಹೆಸರಿನಲ್ಲಿ ಮೂಡುಬಿದಿರೆಯಲ್ಲಿ ಹೈಟೆಕ್ ಮಾದರಿಯ ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದೊಂದು ಸಂತಸದ ಕ್ಷಣ ಎಂದು ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.
ದಿವಂಗತ ಲೋಕನಾಥ ಬೋಳಾರ್ ಅವರ ಹೆಸರಿನಲ್ಲಿ ನಿರ್ಮಾಣ ಆಗಿರುವ ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, ಏಕಕಾಲದಲ್ಲಿ 50 ಮಂದಿ ವೇಟ್ ಲಿಫ್ಟರ್ ಗಳಿಗೆ ತರಬೇತಿ ನೀಡಬಹುದಾಗಿದೆ. ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಇದಕ್ಕೆಲ್ಲ ಡಾ. ಮೋಹನ್ ಆಳ್ವ ಅವರ ಸಹಕಾರವೇ ಕಾರಣ ಎಂದು ವೇಟ್ ಲಿಫ್ಟಿಂಗ್ ತರಬೇತುದಾರರಾದ ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.