ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಮಾರಿಕಾಂಬಾ ದೇವಿಗೆ ರಾಜ್ಯ ಹಾಗೂ ಅಂತರ ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಇದ್ದಾರೆ. ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಅದ್ಧೂರಿ ಜಾತ್ರೆಗೆ ಭಕ್ತರ ದಂಡು ಹರಿದು ಬರುತ್ತದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತಿ ಜಾರಿಗೆ ತರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ದೇವಸ್ಥಾನಕ್ಕೆ ಬರುವ ಭಕ್ತರು ಇನ್ನು ಮುಂದೇ ಸಾಂಪ್ರದಾಯಿಕ ಉಡುಗೆಯಲ್ಲಿ, ದೇಶದ ಸಂಸ್ಕೃತಿಗೆ ಬಿಂಬಿಸುವಂತಹ ಬಟ್ಡೆಗಳನ್ನು ಧರಿಸಿಯೇ ದೇವಿಯ ದರ್ಶನಕ್ಕೆ ಬರಬೇಕು ಎಂದು ದೇವಸ್ಥಾನದ ಎದುರಿನ ಮುಖ್ಯದ್ವಾರದಲ್ಲಿ ಸೂಚನಾಫಲಕವೊಂದನ್ನು ಹಾಕಲಾಗಿದೆ. ಇದು ಕೆಲ ಭಕ್ತರಲ್ಲಿ ಇರುಸು ಮುರುಸಿಗೂ ಕಾರಣವಾಗಿದೆ. ಆಡಳಿತ ಮಂಡಳಿಯ ದಿಢೀರ್ ನಿರ್ಧಾರ ಯಾಕಾಗಿ ಎಂಬ ಪ್ರಶ್ನೆ ಉಂಟಾಗಿದೆ.
ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಕೂಡ ಈ ಹಿಂದೇ ವಸ್ತ್ರಸಂಹಿತೆ ಜಾರಿ ಮಾಡಲಾಗಿತ್ತು. ಈಗ ಮಾರಿಕಾಂಬಾ ದೇವಸ್ಥಾನಕ್ಕೂ ಸಹವಸ್ತ್ರ ಸಂಹಿತೆ ಬಿಸಿ ಮುಟ್ಟಿದೆ. ಸಿರಸಿ ಮಾರಿಕಾಂಬಾ ದೇಗುಲಕ್ಕೆ ಬರುವವರಿಗೆ ವಸ್ತ್ರಸಂಹಿತೆ ಕಡ್ಡಾಯ ಮಾಡಲಾಗಿದೆ. ದಸರಾ ವೇಳೆ ಮಾರಿಕಾಂಬೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಈ ಹೊತ್ತಿನಲ್ಲಿಯೇ ದೇವಸ್ಥಾನದ ಎದುರು ಈ ರೀತಿಯ ವಸ್ತ್ರ ಸಂಹಿತೆ ಕಡ್ಡಾಯ ಮಾಡಿ ಸೂಚನಾ ಫಲಕ ಹಾಕಲಾಗಿದೆ.
ಮಾರಿಕಾಂಬೆ ದರ್ಶನಕ್ಕೆ ಬರುವ ಭಕ್ತರು ದೇವಸ್ಥಾನದ ರೀತಿ ರಿವಾಜುಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಬೇಕು ಎಂಬ ಕಾರಣದಿಂದ ದೇವಸ್ಥಾನದ ಆಡಳಿತ ಮಂಡಳಿ ಈ ಆದೇಶವನ್ನು ಜಾರಿಗೆ ತಂದಿದೆ. ಬರುವ ದಿನಗಳಲ್ಲಿ ಭಕ್ತರಿಂದ ಯಾವ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್. ಜಿ. ನಾಯ್ಕ್ ತಿಳಿಸಿದ್ದಾರೆ.