ಕಾರವಾರ: ಸಂಸದರಾಗಿ ಅಧಿಕಾರ ಹಿಡಿದ ನೂರು ದಿನಗಳಲ್ಲಿಯೇ ರೈಲ್ವೆ ಸೇವೆಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡುತ್ತಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದ್ದು, ಕರಾವಳಿ ಮತ್ತು ತಿರುಪತಿ ನಡುವೆ ರೈಲು ಸಂಪರ್ಕದ ದಶಕಗಳ ಕನಸು ಈಡೇರಿದೆ ಆಗಿದೆ. ತಿರುಪತಿ ಜತೆಗೆ ಹೈದರಾಬಾದ್ ನಗರಕ್ಕೂ ರೈಲು ಸಂಪರ್ಕ ಸಿಕ್ಕಂತೆ ಆಗಿದೆ. ಕಾಚಿಗುಡ – ಮಂಗಳೂರು ವಾರಕ್ಕೆರಡು ದಿನದ ರೈಲಅನ್ನು ಮುರುಡೇಶ್ವರಕ್ಕೆ ವಿಸ್ತರಣೆ ಮಾಡಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಉತ್ತರ ಕನ್ನಡ ರೈಲ್ವೆ ಸಮಿತಿಯ ಕಾರ್ಯದರ್ಶಿ ರಾಜೀವ್ ಗಾಂವಕರ್ ಹಿರೇಗುತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯಿಂದ ತಿರುಪತಿ ಹೈದರಾಬಾದ್ ರೈಲಿಗೆ ವ್ಯಾಪಕ ಬೇಡಿಕೆ ಇತ್ತು. ಕೆಲವು ವರ್ಷಗಳಿಂದ ಈ ಬೇಡಿಕೆಯನ್ನು ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಬೇಡಿಕೆ ಇಟ್ಟಿತ್ತು. ಈ ವಿಷಯ ತಿಳಿದ ಕೂಡಲೇ ಉತ್ತರ ಕನ್ನಡ ರೈಲ್ವೆ ಸಮಿತಿಯು ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಸಂಪರ್ಕಿಸಿ ಯಾವುದೇ ಹೊಸ ರೈಲು ಆರಂಭವಾಗುವುದಾದರೆ ಉತ್ತರ ಕನ್ನಡಕ್ಕೂ ಅದರ ಸೇವೆ ಸಿಗುವಂತೆ ಆಗಬೇಕು ಎಂದು ಮನವಿ ಮಾಡಿತ್ತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಜನರ ಬೇಡಿಕೆಗೆ ಕ್ಷಿಪ್ರ ಸ್ಪಂದಿಸಿದ ಸಂಸದರು ತಾವು ಉಸ್ತುವಾರಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ಜಿಲ್ಲೆಗೂ ಈ ಸೇವೆ ಸಿಗಬೇಕು ಎಂದು ತಕ್ಷಣವೇ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದು, ಮಾತ್ರವಲ್ಲದೇ , ರೈಲ್ವೆ ಮಂಡಳಿ ನವದೆಹಲಿಗೂ ತೆರಳಿ ಪ್ರಯತ್ನ ಪಟ್ಟಿದ್ದರು. ಸಂಸದರ ಮನವಿ ಪರಿಗಣಿಸಿದ ರೈಲ್ವೆ ಸಚಿವಾಲಯವು ಕುಂದಾಪುರದಿಂದ ಮುಂದುವರಿಸಿ ಇದೀಗ ಕಾಚಿಗುಡ – ಮಂಗಳೂರು ರೈಲಅನ್ನು ಉಡುಪಿ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಮುರುಡೇಶ್ವರ ಹೊರಡುವ ರೈಲು ವಾರಕ್ಕೆ ಎರಡು ಬಾರಿ ಬುಧವಾರ ಮತ್ತು ಶನಿವಾರ ಮಂಗಳೂರು– ಕೊಯಂಬತ್ತೂರು ಮೂಲಕ ತಿರುಪತಿ ಸಮೀಪದ ರೆಣಿಗುಂಟಕ್ಕೆ ಮರುದಿನ ಬೆಳಿಗ್ಗೆ 11 ಕ್ಕೆ ತಲುಪಲಿದ್ದು, ಅಲ್ಲಿಂದ ಹೈದರಾಬಾದ್ ಗೆ ಪ್ರಯಾಣ ಮುಂದುವರಿಸಲಿದೆ. ಮತ್ತೆ ಶುಕ್ರವಾರ ಹಾಗೂ ಮಂಗಳವಾರ ಸಂಜೆ 5 ಕ್ಕೆ ರೇಣಿಗುಂಟ ಹೊರಡುವ ರೈಲು ಅಲ್ಲಿಂದ ಮರುದಿನ ಮಧ್ಯಾಹ್ನ 2 ಗಂಟೆಗೆ ಮುರುಡೇಶ್ವರಕ್ಕೆ ಬಂದು ತಲುಪಲಿದೆ ಎಂದು ತಿಳಿಸಿದ್ದಾರೆ.