ಮಂಗಳೂರು: ಉತ್ತರ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆ ಆಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್ ಹಾಗೂ ಶೊಹೇಬ್ ಎಂಬುವವರನ್ನು ಮಂಗಳವಾರ ಬಂಟ್ವಾಳದ ಮೆಲ್ಕಾರ್ ಬಳಿ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಮುಮ್ತಾಜ್ ಆಲಿ ಅವರ ಆತ್ಮಹತ್ಯೆಗೆ ಮಹಿಳೆಯೊಬ್ಬರನ್ನು ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ಅವರ ಸಹೋದರ ಹೈದರ್ ಅಲಿ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ವಿರುದ್ಧ ದೂರು ನೀಡಿದ್ದರು.
ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆ ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರು ದಾಖಲಿಸಿದ್ದರು. ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.