ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 9 ವಿಭಾಗಗಳಲ್ಲಿ ಹು-ಧಾ ನಗರ ಸಾರಿಗೆ ವಿಭಾಗ ಉಳಿದ ವಿಭಾಗಗಳಿಗಿಂತ ನಿಗದಿ ಪಡಿಸಿದ ಗುರಿ ಸಾಧನೆ ಮಾಡಿರುವುದರಿಂದ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ. ಎಂ, ಅವರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಸಿದ್ದಲಿಂಗೇಶ, ವಿಭಾಗೀಯ ಸಂಚಾರ ಅಧಿಕಾರಿ ಕೆ. ಎಲ್. ಗುಡೆಣ್ಣವರ, ವಿಭಾಗೀಯ ಯಾಂತ್ರಿಕ ಎಂಜಿನಿಯರ್ ಪ್ರವೀಣ ಈಡೂರ ಅವರು ಹಾಗೂ ವಿಭಾಗದ ವ್ಯಾಪ್ತಿಯ ನಾಲ್ಕು ಘಟಕಗಳ ಘಟಕ ವ್ಯವಸ್ಥಾಪಕರಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಿ ಅಭಿನಂದಿಸಿದರು.
ಸಾರ್ವಜನಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಮಯಕ್ಕೆ ಸರಿಯಾಗಿ ವಾಹನಗಳ ಕಾರ್ಯಾಚರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ದಿನಗಳಲ್ಲಿ ದಸರಾ, ದೀಪಾವಳಿ ಹಾಗೂ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ಜನ ಸಂಚಾರ ಹೆಚ್ಚಾಗಿ ಇರುವುದರಿಂದ ಹಾಲಿ ಆಚರಣೆಯಲ್ಲಿ ಇರುವ ಎಲ್ಲಾ ಅನುಸೂಚಿಗಳನ್ನು ರದ್ದುಗೊಳಿಸದೇ ನಿಗದಿತ ವೇಳೆಗೆ ಆಚರಣೆ ಮಾಡುವುದು. ವಾರಾಂತ್ಯ/ವಿಶೇಷ ದಿನಗಳಲ್ಲಿ ಅವಶ್ಯಕತೆ ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಿಸುವಂತೆ ತಿಳಿಸಿದರು.
ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕ, ಜಿ ವಿಜಯಕುಮಾರ ಹಾಗೂ ಅಧಿಕಾರಿಗಳಾದ ರವಿ ಅಂಚಗಾವಿ, ಎಸ್ ಎಲ್ ನಾಗಾವಿ ಅವರು ಇದ್ದರು.