ಕುಂದಾಪುರ: ಸೈಬರ್ ಅಪರಾಧಗಳ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿದ್ದು, ಆನ್ಲೈನ್ನಲ್ಲಿ ವ್ಯವಹರಿಸುವವರು ಹೆಚ್ಚು ಜಾಗೃತೆಯಿಂದ ಇರಬೇಕು ಎಂದು ಗಂಗೊಳ್ಳಿ ಪಿಎಸ್ ಐ ಹರೀಶ್ ಹೇಳಿದರು.
ಗಂಗೊಳ್ಳಿಯಲ್ಲಿ ಕೊಸೆಸಾಂವ್ ಅಮ್ಮನವರ ಚರ್ಚ್ ಕಥೊಲಿಕ್ ಸಭಾ ಘಟಕ ಹಾಗೂ ಮಾಧ್ಯಮ ಆಯೋಗದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೈಬರ್ ಕ್ರೈಮ್ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೈಬರ್ ಅಪರಾಧ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚನೆಗೊಳಗಾಗಿ ಕಳೆದುಕೊಂಡು ಹಣವನ್ನು ವಾಪಾಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಕರೆ ಮಾಡಬಹುದು ಅಥವಾ ಎನ್ಸಿಆರ್ಪಿ ಪೋರ್ಟಲ್ ಮೂಲಕ ಕೂಡ ದೂರು ನೀಡಬಹುದು ಎಂದು ಮಾಹಿತಿ ನೀಡಿದರು.
ವಿವಿಧ ಶೈಲಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಹ್ಯಾಕರ್ಸ್ ಮೂಲಕ ಖಾಸಗಿ ಮಾಹಿತಿ ಕದಿಯಲಾಗುತ್ತದೆ. ಬ್ಯಾಂಕಿನವರೆಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆ ಒಟಿಪಿ ಸಂಖ್ಯೆ ಕೇಳಿದರೆ ಯಾರಿಗೂ ನೀಡಿ ಖಾತೆಯಲ್ಲಿರುವ ಹಣ ಕಳೆದು ಕೊಳ್ಳಬೇಡಿ ಎಂದರು.
ಆಪ್ ಮೂಲಕ ಸಾಲ ತೆಗೆಯಬೇಡಿ, ಮೊಬೈಲ್ ಸ್ಟೇಟಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗೆ ನಿಮ್ಮ ಫೋಟೋವನ್ನು ಹಾಕುವಾಗ ಜಾಗರೂಕರಾಗಿರಬೇಕು. ಕಸ್ಟಮ್ಸ್, ಆದಾಯ ತೆರಿಗೆ, ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಫೋನ್ ಅಥವಾ ಇಮೇಲ್ ಮೂಲಕ ಬ್ಯಾಂಕ್ ಖಾತೆಯ ಮೂಲಕ ಮಾಹಿತಿ ಕೇಳುವುದಿಲ್ಲ ಎಂದರು.
ಎಂಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಸೈಬರ್ ಕ್ರೈಂ ಮತ್ತು ಡಿಜಿಟಲ್ ಪಾವತಿ ಕುರಿತು ಮಾಹಿತಿ ನೀಡಿದರು.
ಚರ್ಚ್ ಧರ್ಮಗುರು ವಂದನೀಯ ಥಾಮಸ್ ರೋಷನ್ ಡಿಸೋಜ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷ ಎಡ್ವರ್ಡ್ ಫರ್ನಾಂಡಿಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಮಾಜಿ ಅಧ್ಯಕ್ಷ ಎಲ್ ರೋಯ್ ಕಿರಣ್ ಕ್ರಾಸ್ತಾ ಇದ್ದರು. ಎಡ್ವರ್ಡ್ ಫರ್ನಾಂಡಿಸ್ ಸ್ವಾಗತಿಸಿದರು. ಕಿರಣ್ ಕ್ರಾಸ್ತಾ ವಂದಿಸಿದರು. ರೆನಿಟಾ ಬಾರ್ನೆಸ್ ನಿರೂಪಿಸಿದರು.