ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಇದೇ 21 ರಂದು ನಡೆವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಭಾರಿ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ಸಂಸದ ಹಾಗೂ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಿಶೋರ್ ಕುಮಾರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಯೋಜನೆ, ಯೋಚನೆ ಮತ್ತು ಚಟುವಟಿಕೆಯನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಹಿಂದುಳಿದ ವರ್ಗ ಮತ್ತು ಸಣ್ಣ ಸಮುದಾಯಕ್ಕೆ ಸೇರಿದ ಯುವಕ ಕಿಶೋರ್ ಕುಮಾರ್ ಅವರು ಮುಂದೆ ವಿಧಾನ ಪರಿಷತ್ ಸದಸ್ಯನಾಗಿ ಅತ್ಯಂತ ಅರ್ಥಗರ್ಭಿತವಾಗಿ ಕೆಲಸ ಮಾಡುತ್ತಾರೆ. ಜನ ಸಾಮಾನ್ಯರ ಮತ್ತು ಬಡವರ ಪರ ಕೆಲಸ ಮಾಡುತ್ತಾರೆ. ಅವರು ಕ್ರಾಂತಿಕಾರಿ ಶಕ್ತಿಯಾಗಿ ಮೂಡಿ ಬರಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದರು.
2008 ರಲ್ಲಿ ನಾಣು ಅವಳಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯನಾಗಿ ಮೊದಲ ಬಾರಿಗೆ ಸದನ ಪ್ರವೇಶಿಸಿ, ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನವನ್ನು ರೂ .2 ಸಾವಿರಕ್ಕೆ ಏರಿಸುವಲ್ಲಿ ಶ್ರಮಿಸಿದ್ದೇ. ಕ್ಷೇತ್ರದಲ್ಲಿ 6037 ಮತದಾರರು ಇದ್ದಾರೆ. ಈ ಪೈಕಿ ಬಿಜೆಪಿ ಮೂರುವರೆ ಸಾವಿರಕ್ಕೂ ಅಧಿಕ ಮತದಾರರರನ್ನು ಹೊಂದಿದೆ. ಕಿಶೋರ್ ನಾಮಪತ್ರ ಹಾಕಿರುವುದನ್ನು ಉಭಯ ಜಿಲ್ಲೆಯ ಮತದಾರರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದರಿಂದ ಬಿಜೆಪಿ ಗೆಲುವು ಖಚಿತ ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಆರೋಪಗಳ ಸರಮಾಲೆ ಎದುರಿಸುತ್ತಿದೆ. ಒಂದು ರೀತಿಯಲ್ಲಿ ಆತಂತಕದ ಸ್ಥಿತಿ ಎದುರಿಸುತ್ತಿದೆ. ಮುಡಾ ಸೈಟ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಾಪಸ್ ಮಾಡಿದ್ದಾರೆ. ಹಿಂದೆ ಇದೇ ರೀತಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ವಾಪಸ್ ನೀಡಿದ್ದರು. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭೂಮಿ ವಾಪಸ್ ಕೊಟ್ಟದ್ದು ತಪ್ಪು ಮಾಡಿದಕ್ಕೆ ಒಂದು ಆಧಾರ ಅಲ್ಲವೆ. ಹೀಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದರು. ಆಗ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿಡಿಯೊ ತುಣುಕುಗಳು ಈಗ ಹರಿದಾಡುತ್ತಿವೆ. ಅದೇ ನ್ಯಾಯವನ್ನು ಸಿದ್ದರಾಮಯ್ಯ ಒಪ್ಪಿದರೆ ಸಹಜವಾಗಿ ಪದತ್ಯಾಗ ಮಾಡಬೇಕಾಗುತ್ತದೆ. ಇದನ್ನು ಬಿಟ್ಟು ಆತ್ಮಸಾಕ್ಷಿ ಎಂಬ ನ್ಯಾಯಕ್ಕೆ ಬಿಟ್ಟರೆ , ಮೂಲ ನ್ಯಾಯಕ್ಕೆ ಏನು ಎನ್ನುವುದು ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದರು.
ಅಭ್ಯರ್ಥಿ ಕಿಶೋರ್ ಕುಮಾರ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಧುರೀಣ ಸಂಜಯ್ ಪ್ರಭು ಇದ್ದರು.