Breaking News

ಅಮೆರಿಕದಲ್ಲಿ ತುಳುನಾಡಿನ ಯಕ್ಷಗಾನ ತಂಡದ ಮೋಡಿ, 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದ ತಂಡ, ಅದ್ದೂರಿ ಸ್ವಾಗತ

 

ಮಂಗಳೂರು: ಅಮೆರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜತೆಗೆ ತಾಯ್ನಾಡು ಮಂಗಳೂರಿಗೆ ಮರಳಿದ್ದು, ಅವರಿಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್  ಪದಾಧಿಕಾರಿಗಳು ಭರ್ಜರಿ ಸ್ವಾಗತಿಸಿದರು.

ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿ ತಂಡ ಅಮೆರಿಕ ದೇಶದ ಬೇರೆ ಬೇರೆ ಕಡೆಗಳಲ್ಲಿ ಕರಾವಳಿಯ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿ ವಾಪಸ್ ಆಗಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ಈ ವೇಳೆ ಮಾತನಾಡಿ, ವಿದೇಶಗಳಲ್ಲಿ ತುಳುನಾಡಿನ ಕಲೆ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸಿತು.  ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿ  ವಿಚಾರ ಎಂದರು.

  1.  

ಅಮೆರಿಕದ ಎರಡು ನಗರಗಳಲ್ಲಿ ಪಟ್ಲ ಫೌಂಡೇಷನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೆರಿಕ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಅಮೆರಿಕ ನಗರಗಳಲ್ಲಿ ಪಟ್ಲ ಫೌಂಡೇಶನ್ ಡೇ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಅ. 18 ಅನ್ನು ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ ಎಂದು ಘೋಷಣೆ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ ಎಂದು ಘೋಷಿಸಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದರು.

ಪ್ರೊ.ಎಂ.ಎಲ್. ಸಾಮಗ ಅವರು ಮಾತನಾಡಿ, ಅಮೆರಿಕ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು.  ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.

ಪಟ್ಲ ಟ್ರಸ್ಟ್  ಪ್ರಧಾನ ಕಾರ್ಯದರ್ಶಿ ಅಡ್ಯಾರ್  ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ,  ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್  ಇದ್ದರು.

  1.  

Leave a Reply

Your email address will not be published. Required fields are marked *